ಕಾಂಗ್ರೆಸ್ ಸರ್ಕಾರ(Congress) ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್ ದರ(Electricity Hike) ಏಕಾಏಕಿ ಏರಿಕೆಯಾಗಿತ್ತು. ಈಗ ಹಾಲಿನ ಗ್ರಾಹಕ(Milk Price Hike)ರಿಗೂ ಕೂಡ ಶಾಕ್ ಎದುರಾಗುವ ಸಾಧ್ಯತೆ ಇದೆ.
ಹಾಲು ಒಕ್ಕೂಟಗಳು ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲು ಮುಂದಾಗಿದ್ದವು. ಆದರೆ, ಸಿಎಂ ಸಿದ್ದರಾಮಯ್ಯ(Siddaramaiah) ಸೂಚನೆ ನೀಡಿದ್ದ ಮೇರೆಗೆ ಹಾಲು ಒಕ್ಕೂಟ ತನ್ನ ನಿರ್ಧಾರ ಬದಲಾಯಿಸಿ ಹಾಲಿನ ಪ್ರೋತ್ಸಾಹ ಧನ ಮುಂದುವರೆಸಲು ಮುಂದಾಗಿದೆ. ಆದರೆ, ಇದರ ಪರಿಣಾಮ ಗ್ರಾಹಕರ ಮೇಲೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
ಒಕ್ಕೂಟಗಳು ನಷ್ಟದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸಲು ಮುಂದಾಗಿದ್ದವು. ಆದರೆ, ಇದಕ್ಕೆ ವಿರೋಧ ಮಾಡಿದ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹ ಧನ ಕಡಿತ ಮಾಡದಂತೆ ಸೂಚನೆ ನೀಡಿದ್ದರು. ಹೀಗಾಗಿ ಕಡಿತಗೊಳಿಸಿದ ದರವನ್ನು ಮತ್ತೆ ರೈತರಿಗೆ ನೀಡಲು ಒಕ್ಕೂಟಗಳು ಮುಂದಾಗಿವೆ.
ಈಗ ನಂದಿನಿ ಹಾಲಿನ ದರ ಪರಿಷ್ಕರಿಸುವಂತೆ ಒಕ್ಕೂಟಗಳು ಪಟ್ಟು ಹಿಡಿದಿವೆ. ಲೀಟರ್ ಹಾಲಿನ ದರದ ಮೇಲೆ 5 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ. ರೈತರಿಗೆ ಕೊಡುವ ಪ್ರೋತ್ಸಾಹ ದರ ಮುಂದುವರೆಸುತ್ತೇವೆ. ಅದರ ಬದಲಿಗೆ ಮಾರಾಟವಾಗುವ ಪ್ರತಿ ಲೀಟರ್ ಮೇಲೆ 5 ರೂ ಹೆಚ್ಚಿಸಬೇಕು. ರಾಜ್ಯದ 15 ಒಕ್ಕೂಟಗಳು ನಷ್ಟದ ಪರಿಸ್ಥಿತಿಯಲ್ಲಿವೆ. ಸದ್ಯ ಹಾಲು ಮಾರಾಟ ಪ್ರತಿ ಲೀ. 39 ರೂಪಾಯಿ ಇದೆ. ಇದರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಕೊಡುತ್ತಿದ್ದೇವೆ. ಮಾರಾಟಗಾರರಿಗೆ ಪ್ರತಿ ಲೀ.ಗೆ 2 ರೂ ಕಮೀಷನ್ ಕೊಡಬೇಕು. ಮಧ್ಯ ಅಂತರ ಕೇವಲ 1.50 ಪೈಸೆ ಇದೆ. ಇಷ್ಟು ಲಾಭದಿಂದ ನಾವು ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಮೂಲ್ ತಿಳಿಸಿದೆ.