ಕಾಸರಗೋಡು… ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಜಿಲ್ಲೆ. ಕೇರಳ ರಾಜ್ಯಕ್ಕೆ ಸೇರಿದ್ರೂ ಕಾಸರಗೋಡಿನ ಜೊತೆಗೆ ಕನ್ನಡಿಗರ ನಂಟು ಅಂಟಿನುಂಡೆಯಷ್ಟೇ ಗಟ್ಟಿಯಾಗಿದೆ. ಹಲವು ಧರ್ಮ, ನಾನಾ ಭಾಷೆ, ನಾನಾ ಸಂಸ್ಕøತಿಗಳನ್ನು ಹೊಂದಿರುವ ನಾಡು ಕಾಸರಗೋಡು. ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಅನನ್ಯ ಕೊಡುಗೆಗಳನ್ನು ನೀಡಿರುವ ಕಾಸರಗೋಡಿಗೆ ಐತಿಹಾಸಿಕ ಹಿನ್ನೆಲೆಯೂ ಇದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕುಂಬಳೆ ರಾಜರ ಅಧೀನದಲ್ಲಿದ್ದ ಕಾಸರಗೋಡು ಅರಬ್ಬರ ಪ್ರಮುಖ ವ್ಯಾಪಾರ ತಾಣವಾಗಿತ್ತು. ಹಾಗಾಗಿ ಕಾಸರಗೋಡು ಅನ್ನು ಹರ್ಕ್ ವಿಲ್ಲಿಯಾ ಅಂತ ಕರೆಯುತ್ತಿದ್ದರು. ವಿಜಯನಗರ, ಮೈಸೂರು, ಇಕ್ಕೇರಿ, ಕೋಲತ್ತಿರಿ ರಾಜ್ಯ ವಂಶಸ್ಥರು ರಾಜ್ಯಾಡಳಿತ ನಡೆಸಿದ್ದರು. ಇದು ಕಾಸರಗೋಡಿನ ಚೊಕ್ಕವಾದ ಇತಿಹಾಸ.
ರಾಷ್ಟ್ರಕವಿ ಗೋವಿಂದ ಪೈ, ಕಯ್ಯಾರ ಕಿಂಜ್ಞಣ್ಣ ರೈ ಸೇರಿದಂತೆ ಹಲವು ಕವಿಗಳ, ಚಿಂತಕರ, ಕಲಾವಿದರ, ಸಂಶೋಧಕರ, ಹೋರಾಟಗಾರರ ತವರೂರು ಕೂಡ ಹೌದು.
ಇಂತಹ ಐತಿಹಾಸಿಕ ನಾಡಿನಿಂದ ಇದೀಗ ಯುವ ಕ್ರಿಕೆಟಿಗನ ಉದಯವಾಗಿದೆ. ಆತನ ಹೆಸರು ಮಹಮ್ಮದ್ ಅಜರುದ್ದೀನ್.
.
ಮಹಮ್ಮದ್ ಅಜರುದ್ದಿನ್ ಕೇರಳ ರಣಜಿ ತಂಡದ ಆಟಗಾರ. ಆದ್ರೆ 14ನೇ ಐಪಿಎಲ್ ನಲ್ಲಿ ಆಡುತ್ತಿರುವುದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ.
ಅಂದ ಹಾಗೇ ಮಹಮ್ಮದ್ ಅಜರುದ್ದೀನ್ ಸದ್ಯ ದೇಶಿ ಕ್ರಿಕೆಟ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಅದ್ರಲ್ಲೂ ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲಿ ವೇಗದ ಶತಕ ದಾಖಲಿಸಿದ್ದ ದಾಖಲೆಯೂ ಅಜರುದ್ದೀನ್ ಹೆಸರಿನಲ್ಲಿದೆ. ಮುಂಬೈ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. 26ರ ಹರೆಯದ ಮಹಮ್ಮದ್ ಅಜರುದ್ದೀನ್ 52 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಸಿಡಿಸಿದ್ದರು.
ನಂತರ ಅಜರುದ್ದೀನ್ ಅವರ ಅದೃಷ್ಟವೇ ಬದಲಾಗಿ ಹೋಯ್ತು. ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ ತಂಡ 1.37 ಕೋಟಿಗೆ ಖರೀದಿ ಮಾಡಿತ್ತು. ಸದ್ಯ ಆರ್ ಸಿಬಿ ಕ್ಯಾಂಪ್ ನಲ್ಲಿರುವ ಮಹಮ್ಮದ್ ಅಜರುದ್ದೀನ್ ತನ್ನ ಚೊಚ್ಚಲ ಪಂದ್ಯದಲ್ಲೇ ವಿರಾಟ್ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯೂ ದಟ್ಟವಾಗಿದೆ.
ಅಷ್ಟಕ್ಕೂ ಮಹಮ್ಮದ್ ಅಜರುದ್ದೀನ್ ಅವರ ಬಹುದಿನಗಳ ಕನಸು ಕೂಡ ಈಡೇರಲಿದೆ. ತನ್ನ ನೆಚ್ಚಿನ ಆಟಗಾರನಾಗಿರುವ ವಿರಾಟ್ ಜೊತೆ ಇನಿಂಗ್ಸ್ ಆರಂಭಿಸುವುದು ಅಂದ್ರೆ ಅದು ಅವಿಸ್ಮರಣೀಯ ಘಳಿಗೆಯೂ ಆಗಲಿದೆ.
ಮಹಮ್ಮದ್ ಅಜರುದ್ದೀನ್ ಹುಟ್ಟಿದ್ದು ಮಾರ್ಚ್ 22, 1994ರಲ್ಲಿ. ಗಡಿ ಜಿಲ್ಲೆ ಕಾಸರಗೋಡು ಜಿಲ್ಲೆಯ ತಳಂಗರ ಊರು ತವರೂರು. ಎಂಟು ಮಂದಿ ಮಕ್ಕಳಲ್ಲಿ ಅಜರುದ್ದೀನ್ ಅವರು ಕೂಡ ಒಬ್ಬರು. ಅಜರುದ್ದೀನ್ ಅವರ ಹೆತ್ತವರು ಅಜ್ಮಲ್ ಅಂತ ಹೆಸರಿಡಲು ಯೋಚನೆ ಮಾಡುತ್ತಿದ್ದರು. ಆದ್ರೆ ದೊಡ್ಡ ಮಗನ ನೆಚ್ಚಿನ ಆಟಗಾರ ಆಗೀನ ಭಾರತ ಕ್ರಿಕೆಟ್ ತಂಡದ ನಾಯಕ ಮಹಮ್ಮದ್ ಅಜರುದ್ದೀನ್. ಹೀಗಾಗಿ ತನ್ನ ತಮ್ಮನಿಗೆ ಮಹಮ್ಮದ್ ಅಜರುದ್ದೀನ್ ಅಂತನೇ ನಾಮಕರಣ ಮಾಡಿದ್ದರು.
ಹಾಗೇ ನೋಡಿದ್ರೆ ಕಾಸರಗೋಡಿನಲ್ಲಿ ಕ್ರಿಕೆಟ್ ಗಿಂತಲೂ ಜನಪ್ರಿಯ ಕ್ರೀಡೆ ಫುಟ್ ಬಾಲ್. ಆದ್ರೆ ಮಹಮ್ಮದ್ ಅಜರುದ್ದೀನ್ ಅವರ ಅಣ್ಣಂದಿರು ಸ್ಥಳೀಯ ಕ್ರಿಕೆಟ್ ಪಂದ್ಯಗಳನ್ನಾಡುತ್ತಿದ್ದರು. ಹೀಗಾಗಿ ಮಹಮ್ಮದ್ ಅಜರುದ್ದೀನ್ ಅವರು ಅಣ್ಣಂದಿರು ಆಡುತ್ತಿರುವುದರಿಂದ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡ್ರು
ತನ್ನ ಹತ್ತನೇ ಹರೆಯದಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿಕೊಂಡಿದ್ದ ಅಜರುದ್ದೀನ್ ಒಬ್ಬ ಕ್ರಿಕೆಟಿಗನಾಗಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಆರಂಭದಲ್ಲಿ ತಳಂಗರ ಟಾಸ್ ಕ್ಲಬ್ ನಲ್ಲಿ ತರಬೇತಿ ಪಡೆದ ಮಹಮ್ಮದ್ ಅಜರುದ್ದೀನ್, 11ರ ಹರೆಯದಲ್ಲೇ ಕಾಸರಗೋಡು 13 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಲ್ಲದೆ ವಿಕೆಟ್ ಕೀಪಿಂಗ್ ನಲ್ಲೂ ಮಿಂಚು ಹರಿಸಿದ್ದರು. ಪರಿಣಾಮ ಜಿಲ್ಲಾ ತಂಡದ ನಾಯಕನಾಗಿದ್ದರು.
ಬಳಿಕ ಕೇರಳ 15 ವಯೋಮಿತಿ ತಂಡದ ನಾಯಕನಾಗಿದ್ದ ಅಜರುದ್ದೀನ್, ಕೇರಳ ಕ್ರಿಕೆಟ್ ಸಂಸ್ಥೆಯ ಕಣ್ಣಿಗೂ ಬಿದ್ರು. ಬಳಿಕ ಕೊಟ್ಟಾಯಂನಲ್ಲಿ ಕೆಸಿಎ ಅಕಾಡೆಮಿ ಸೇರಿಕೊಂಡ್ರು.
ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಕೊಚ್ಚಿಯ ಥಿವಾರ ಎಸ್ ಎಚ್ ಸ್ಕೂಲ್ ಮತ್ತು ಕಾಲೇಜ್ ಸೇರಿಕೊಂಡ್ರು. ಜೊತೆಗೆ ಕೇರಳ ಕ್ರಿಕೆಟ್ ಸಂಸ್ಥೆಯ ಕೊಚ್ಚಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ್ರು.
ಈ ಹಂತದಲ್ಲಿ ಮಹಮ್ಮದ್ ಅಜರುದ್ದೀನ್ ಅವರಿಗೆ ಮಾರ್ಗದರ್ಶನ ನೀಡಿದ್ದು ಕೋಚ್ ಬಿಜು ಮೋನ್. ಅದ್ಭುತ ಬ್ಯಾಟಿಂಗ್ ಮೂಲಕ ಕೇರಳ 19 ವಯೋಮಿತಿ ತಂಡದಲ್ಲೂ ಸ್ಥಾನ ಪಡೆದ್ರು. ತಮಿಳುನಾಡು ವಿರುದ್ಧದ ತನ್ನ ಮೊದಲ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದ್ದ ಹೆಗ್ಗಳಿಕೆ ಇವರದ್ದು. ನಂತರ ಹಿಂತಿರುಗಿ ನೋಡದ ಮಹಮ್ಮದ್ ಅಜರುದ್ದೀನ್ ಕೇರಳ 23 ವಯೋಮಿತಿ ಹಾಗೂ ರಾಜ್ಯ ತಂಡಕ್ಕೂ ಆಯ್ಕೆಯಾದ್ರು.
2015-16ನೇ ಸಾಲಿನಲ್ಲಿ ಗೋವಾ ವಿರುದ್ಧ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಆಡಿದ್ದರು.
2018-19ರಲ್ಲಿ ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕೇರಳ ತಂಡದ ನಾಯಕ ಸಚಿನ್ ಬೇಬಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಕಾರಣ ಮಹಮ್ಮದ್ ಅಜರುದ್ದೀನ್ ಸೇರಿ ಒಟ್ಟು ಐದು ಮಂದಿ ಆಟಗಾರರಿಗೆ ಮೂರು ಪಂದ್ಯಗಳಿಗೆ ನಿಷೇಧದ ಶಿಕ್ಷೆ ವಿಧಿಸಲಾಗಿತ್ತು. ಇದು ಒಂದು ಅಜರುದ್ದೀನ್ ಅವರ ಕ್ರಿಕೆಟ್ ಬದುಕಿಗೆ ಕಪ್ಪುಚುಕ್ಕೆಯಾಗಿದೆ. ಆದ್ರೆ ತನ್ನ ಸ್ಪೋಟಕ ಬ್ಯಾಟಿಂಗ್ ಮೂಲಕ ಕೇರಳ ತಂಡದ ಪ್ರಮುಖ ಸ್ಟಾರ್ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಕೇರಳ ಪರ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿದ್ದ ಮೊದಲ ಬ್ಯಾಟ್ಸ್ ಮೆನ್ ಕೂಡ ಹೌದು.
ಒಟ್ಟು 22 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿರುವ ಮಹಮ್ಮದ್ ಅಜರುದ್ದೀನ್ 959 ರನ್ ಗಳಿಸಿದ್ದಾರೆ. 30 ಲೀಸ್ಟ್ ಎ ಪಂದ್ಯಗಳಲ್ಲಿ 585 ರನ್ ಗಳಿಸಿದ್ದಾರೆ. ಹಾಗೇ 24 ಟಿ-ಟ್ವೆಂಟಿ ಪಂದ್ಯಗಳಲ್ಲಿ 451 ರನ್ ಪೇರಿಸಿದ್ದಾರೆ.
ಆರಂಭಿಕ ಆಟಗಾರನಾಗಿದ್ರೂ ಮಹಮ್ಮದ್ ಅಜರುದ್ದೀನ್ ಅವರಿಗೆ ಕೇರಳ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಯ್ತು. ಕೇರಳದ ಮಾಜಿ ಕೋಚ್ ಡೇವ್ ವಾಟ್ಮೋರ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಿಸುತ್ತಿದ್ದರು. ಹೀಗಾಗಿ ತನ್ನ ಪ್ರತಿಭೆ ಮತ್ತು ಸಾಮಥ್ರ್ಯವನ್ನು ನಿರೂಪಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಟೀನೂ ಯೋಹಾನನ್ ಅವರು ಕೋಚ್ ಆದ ನಂತರ ಆರಂಭಿಕನಾಗಿ ಕಣಕ್ಕಿಳಿಸಿದ್ರು. ಇಲ್ಲಿ ಮಹಮ್ಮದ್ ಅಜರುದ್ದೀನ್ ಅವಕಾಶಕ್ಕಾಗಿ ಕಾಯುತ್ತಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ್ರು.
ಈ ನಡುವೆ, ಮಹಮ್ಮದ್ ಅಜರುದ್ದೀನ್ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಅವರನ್ನು ಎರಡು ಮೂರು ಬಾರಿ ಭೇಟಿ ಮಾಡಿದ್ದರು. ಆಗ ತನ್ನ ಹೆಸರು ಮಹಮ್ಮದ್ ಅಜರುದ್ದೀನ್ ಹೇಗೆ ಬಂತು ಅನ್ನೋ ವಿಚಾರವನ್ನು ಹಂಚಿಕೊಂಡಿದ್ದರು. ತನ್ನ ಅಣ್ಣನ ನೆಚ್ಚಿನ ಆಟಗಾರ ಮಹಮ್ಮದ್ ಅಜರುದ್ದೀನ್. ಆದ್ರೆ ಅಜರುದ್ದೀನ್ ಗೆ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ.
ಒಟ್ಟಿನಲ್ಲಿ ಮಹಮ್ಮದ್ ಅಜರುದ್ದೀನ್ ಅವರಿಗೆ ಈಗ ಐಪಿಎಲ್ ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಅದನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡೋಣ.