ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್ಎಸ್ಎಸ್) ರಾಜಕೀಯ ಪಕ್ಷವಾದ ಬಿಜೆಪಿಯ ಜೊತೆ ತಳುಕು ಹಾಕುವುದು ಅಥವಾ ಬಿಜೆಪಿಯ ದೃಷ್ಟಿಕೋನದಿಂದ ಅಳೆಯುವುದು ಸಂಪೂರ್ಣ ತಪ್ಪು ಎಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. ಸಂಘವನ್ನು ಅರ್ಥ ಮಾಡಿಕೊಳ್ಳಲು ರಾಜಕೀಯ ಕನ್ನಡಕ ಕಳಚಿಡಬೇಕು ಎಂದು ಅವರು ಖಡಕ್ ಆಗಿ ನುಡಿದಿದ್ದಾರೆ.
ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಆರ್ಎಸ್ಎಸ್ 100 ವ್ಯಾಖ್ಯಾನ ಮಾಲಾ ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘದ ಅಸ್ಮಿತೆ ಮತ್ತು ಕಾರ್ಯವೈಖರಿಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದರು. ಪ್ರಸ್ತುತ ಸಮಾಜದಲ್ಲಿ ಆರ್ಎಸ್ಎಸ್ ಬಗ್ಗೆ ಇರುವ ತಪ್ಪು ಗ್ರಹಿಕೆಗಳ ಬಗ್ಗೆ ಮಾತನಾಡಿದ ಅವರು, ಸಂಘವನ್ನು ಬೇರೆ ಯಾವುದೇ ಸಂಘಟನೆಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಬಹಳಷ್ಟು ಜನರು ಆರ್ಎಸ್ಎಸ್ ಅನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕನ್ನಡಿಯ ಮೂಲಕ ನೋಡುವ ಮತ್ತು ಅರ್ಥೈಸಿಕೊಳ್ಳುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದು ಸಂಘದ ಮೂಲ ಉದ್ದೇಶವನ್ನೇ ಮರೆಮಾಚುತ್ತದೆ. ಆರ್ಎಸ್ಎಸ್ ಬೇರೆ, ರಾಜಕೀಯ ಬೇರೆ. ಸಂಘವನ್ನು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಅಥವಾ ಬಿಜೆಪಿಯ ಅಂಗಸಂಸ್ಥೆಯಂತೆ ನೋಡುವುದು ದೊಡ್ಡ ಪ್ರಮಾದ. ಈ ರೀತಿ ಮಾಡುವುದರಿಂದ ತಪ್ಪು ತಿಳುವಳಿಕೆಗಳು ಹೆಚ್ಚಾಗುತ್ತವೆ ಎಂದು ಭಾಗವತ್ ಎಚ್ಚರಿಸಿದರು.
ಆರ್ಎಸ್ಎಸ್ ಎಂದರೆ ಕೇವಲ ಸಮಾಜ ಸೇವೆ ಮಾಡುವ ಮತ್ತೊಂದು ಎನ್ಜಿಒ ಅಥವಾ ಸಂಸ್ಥೆಯಲ್ಲ. ಸಂಘದ ಕಾರ್ಯವ್ಯಾಪ್ತಿ ಮತ್ತು ದೃಷ್ಟಿಕೋನ ವಿಶಾಲವಾದುದು. ನೀವು ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಹೋಲಿಕೆಗಳನ್ನು ಮಾಡುವುದನ್ನು ನಿಲ್ಲಿಸಿ. ಇದನ್ನು ಕೇವಲ ಮತ್ತೊಂದು ಸೇವಾ ಸಂಸ್ಥೆ ಎಂದು ಪರಿಗಣಿಸಿದರೆ ನೀವು ದಾರಿ ತಪ್ಪಿದಂತೆಯೇ ಎಂದು ಅವರು ವಿಶ್ಲೇಷಿಸಿದರು.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ 100 ವರ್ಷಗಳ ಪಯಣ ಎಂಬ ಪ್ರಬುದ್ಧ ನಾಗರಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಭಾಗವತ್, ಸಂಘದ ನೂರು ವರ್ಷಗಳ ಐತಿಹಾಸಿಕ ವಿಕಸನವನ್ನು ಬಿಚ್ಚಿಟ್ಟರು. ನೈತಿಕವಾಗಿ ಪ್ರಾಮಾಣಿಕ ಮತ್ತು ಸದ್ಗುಣಶೀಲ ವ್ಯಕ್ತಿಗಳಾದ ಸಜ್ಜನರ ಸೃಷ್ಟಿಯೇ ಆರ್ಎಸ್ಎಸ್ನ ಮೂಲ ಉದ್ದೇಶ. ನಿಸ್ವಾರ್ಥ ಸೇವೆ ಮತ್ತು ಮೌಲ್ಯಾಧಾರಿತ ಜೀವನ ನಡೆಸುವ ವ್ಯಕ್ತಿಗಳಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.
ಯುವ ಸಮ್ಮೇಳನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಸರಸಂಘಚಾಲಕರು, ಭಾರತದ ಪ್ರಾಚೀನ ಸನಾತನ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿಗೆ ಸ್ವಾವಲಂಬನೆ (ಸ್ವದೇಶಿ) ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ನಿವೃತ್ತ ಅಧಿಕಾರಿಗಳು, ವೈದ್ಯರು, ವಕೀಲರು, ಶಿಕ್ಷಣ ತಜ್ಞರು ಮತ್ತು ಪ್ರಮುಖ ನಾಗರಿಕರು ಪಾಲ್ಗೊಂಡಿದ್ದರು.








