ತಲೆ – ಕೈ ಕಾಲು ಇಲ್ಲದ ಚರ್ಮ ಸುಲಿದ 50 ಪ್ರಾಣಿಗಳ ಮೃತದೇಹ ಪತ್ತೆ…
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೋಕಿನ ಸೀಬನಹಳ್ಳಿ ಗುಡ್ಡೆಯ ಸಮೀಪ ತಲೆ, ಚರ್ಮವಿಲ್ಲದ ಸುಮಾರು 50 ಕ್ಕೂ ಹೆಚ್ಚು ಪ್ರಾಣಿಗಳ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ತಡ ರಾತ್ರಿ ಸೀಬನಹಳ್ಳಿ ಗುಡ್ಡೆ ಪಕ್ಕದಲ್ಲಿ ಯಾರೋ ಅಪರಿಚಿತರು ಪ್ರಾಣಿಗಳ ಮೃತದೇಹ ತಂದು ಬಿಸಾಡಿ ಹೋಗಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆ ತಲೆ – ಚರ್ಮವಿಲ್ಲದ ಪ್ರಾಣಿಗಳ ಮೃತದೇಹದ ರಾಶಿಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಯಾರೋ ಕಿಡಿಗೇಡಿಗಳು ಕಾಡು ಪ್ರಾಣಿಗಳನ್ನ ಬೇಟೆ ಆಡಿ ಕೊಂದು ಚರ್ಮ ಸುಲಿದು, ತಲೆಕತ್ತರಿಸಿಕೊಂಡು ಬಿಸಾಡಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಇನ್ನು ಕೆಲವರು ಸತ್ತ ಕುರಿಗಳನ್ನು ಅದರ ಮಾಲೀಕರು ಚರ್ಮ ಸುಲಿದುಕೊಂಡು ಈ ರೀತಿ ಬಿಸಾಡಿರಬಹುದೆಂದೂ ಅನುಮಾನ ಪಟ್ಟಿದ್ದಾರೆ. ಅಷ್ಟೇ ಅಲ್ಲ ವಾಮಾಚಾರಕ್ಕೆ ಪ್ರಾಣಿಗಳನ್ನ ಬಳಸಿಕೊಂಡಿರಬಹುದು ಅಂತಲೂ ಚರ್ಚೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಹೀಗೆ ತರಹೇವಾರಿ ಚರ್ಚೆಯಾಗುತ್ತಿದೆ.
ಸದ್ಯಕ್ಕೆ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.