ಟೀಂ ಇಂಡಿಯಾದ ಕೋಚ್ ಆಗ್ತಾರಾ ಎಂ.ಎಸ್.ಧೋನಿ..!? ಸದ್ಯ ಕ್ರಿಕೆಟ್ ವಿಶ್ಲೇಷಕರಲ್ಲಿ ಮೊಳಕೆ ಹೊಡೆದಿರುವ ಕುತೂಹಲಕಾರಿ ಪ್ರಶ್ನೆ..
ಯಾಕಂದ್ರೆ ಸದ್ಯ ಟೀಂ ಇಂಡಿಯಾದ ಕೋಚ್ ಆಗಿರುವ ರವಿಶಾಸ್ತ್ರಿ ಐಸಿಸಿ ಟಿ-20 ವಿಶ್ವಕಪ್ ಬಳಿಕ ತಮ್ಮ ಸ್ಥಾನ ತ್ಯಜಿಸಲಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಹೊಸ ಕೋಚ್ ಬರೋದು ಪಕ್ಕಾ ಆಗಿದೆ. ಹಾಗಾದ್ರೆ ಭಾರತ ಕ್ರಿಕೆಟ್ ತಂಡದ ಮುಂದಿನ ದ್ರೋಣಾಚಾರ್ಯ ಯಾರು..? ಯಂಗ್ ಗನ್ ಗಳೇ ಇರುವ ತಂಡಕ್ಕೆ ಮಾಸ್ಟರ್ ಯಾರಾಗ್ತಾರೆ..? ಅನ್ನೋ ಪ್ರಶ್ನೆ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ರೇಸ್ ನಲ್ಲಿದ್ದಾರೆ ಘಟಾನುಘಟಿಗಳು..!!
ಹೌದು..! ಟೀಂ ಇಂಡಿಯಾ ಕೋಚ್ ಹುದ್ದೆ ರೇಸ್ ನಲ್ಲಿ ಭಾರತದ ಮಾಜಿ ಸ್ಟಾರ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಇದ್ದಾರೆ. ಇದರ ಜೊತೆಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರನ್ನು ಮತ್ತೆ ಕೋಚ್ ಸ್ಥಾನದಲ್ಲಿ ಕೂರಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಇದಕ್ಕೆ ಕುಂಬ್ಳೆ ಓಕೆ ಅನ್ನೋದು ಕಷ್ಟ ಎನ್ನಲಾಗುತ್ತಿದೆ. ಯಾಕೆಂದ್ರೆ ವಿರಾಟ್ ಕೊಹ್ಲಿ ಜೊತೆ ಕುಂಬ್ಳೆ ಸಂಬಂಧ ಅಷ್ಟಕಷ್ಟೆ.
ಧೋನಿಗೆ ಹೊಡೆಯುತ್ತಾ ಲಕ್..?
ಇದು ಕ್ರಿಕೆಟ್ ಪಂಡಿತರಲ್ಲಿ ಮೊಳಕೆ ಹೊಡೆದಿರುವ ಆಸಕ್ತಿಕರ ವಿಚಾರ. ಯಾಕೆಂದ್ರೆ ಸದ್ಯ ಟೀಂ ಇಂಡಿಯಾದಲ್ಲಿ ಯಂಗ್ ಗನ್ ಗಳೇ ಇದ್ದಾರೆ. ಅದರಲ್ಲೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಧೋನಿ ಬಗ್ಗೆ ವಿಶೇಷವಾದ ಗೌರವವಿದೆ. ಈಗಲೂ ಧೋನಿಯೇ ನನ್ನ ನಾಯಕ ಎಂದು ಘಂಟಾಘೋಷವಾಗಿ ವಿರಾಟ್ ಹೇಳುತ್ತಾರೆ. ಹೀಗಾಗಿ ಧೋನಿಗೆ ಕೋಚ್ ಹುದ್ದೆ ಸಿಗಬೋದಾ..?
ಇದಲ್ಲದೇ ಟೀಂ ಇಂಡಿಯಾದಲ್ಲಿ ಈಗ ಯುವ ಆಟಗಾರರೇ ಹೆಚ್ಚಿದ್ದು, ಅವರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋ ವಿಚಾರದಲ್ಲಿ ವಿರಾಟ್ ಗಿಂತ ಧೋನಿ ಪಂಟರ್. ಯುವ ಆಟಗಾರರಲ್ಲಿರುವ ಪ್ರತಿಭೆಯಲ್ಲಿ ಹೆಕ್ಕಿ ಹೊರ ತೆಗೆಯುವುದರಲ್ಲಿ ಧೋನಿಗೆ ಧೋನಿಯೇ ಸರಿಸಾಟಿ.
ಮೆಂಟರ್ ಆಗಿದ್ದು ಪುಷ್ಠಿ
ಹೌದು..! ಟಿ-20 ವಿಶ್ವಕಪ್ ಗೆ ಭಾರತ ತಂಡ ಪ್ರಕಟವಾಗುತ್ತಿದ್ದಂತೆ ಯಾವ ಆಟಗಾರರಿಗೆ ಸ್ಥಾನ ಸಿಕ್ಕಿದೆ ಅನ್ನೋ ವಿಚಾರಕ್ಕಿಂತ ಧೋನಿ ಮೆಂಟರ್ ಆಗಿ ಆಯ್ಕೆ ಆಗಿದ್ದು, ಎಲ್ಲರ ಗಮನ ಸೆಳೆಯಿತು. ಟಿ-20 ವಿಶ್ವಕಪ್ ನಲ್ಲಿ ಧೋನಿ ಟೀಂ ಇಂಡಿಯಾದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದು ಧೋನಿಗೆ ಕೋಚ್ ಹುದ್ದೆ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಇಟ್ಟ ಮೊದಲ ಹೆಜ್ಜೆ ಆಗಿದ್ದರೂ ಆಗಿರಬಹುದು.
ಯಾಕೆಂದ್ರೆ ಧೋನಿ ಮೆಂಟರ್ ಆಗಿದ್ದರೇ ತಂಡ ಹೇಗೆ ಇರುತ್ತದೆ. ತಂಡದ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನ ಗಮನಿಸಿ ಧೋನಿಗೆ ದ್ರೋಣಾಚಾರ್ಯ ಪಟ್ಟ ನೀಡಬಹುದು.