ರವಿಶಾಸ್ತ್ರಿ – ವಿರಾಟ್ ಜೊತೆ ವಾಗ್ವಾದ – ಮುಖ ನೋಡಿ ಮಾತನಾಡುತ್ತಿರಲಿಲ್ಲ -ಎಮ್.ಎಸ್. ಪ್ರಸಾದ್..!
ರವಿಶಾಸ್ತ್ರಿ.. ಟೀಮ್ ಇಂಡಿಯಾದ ಹೆಡ್ ಕೋಚ್. ಅದಕ್ಕಿಂತ ಮುನ್ನ ಅದ್ಭುತ ಕ್ರಿಕೆಟ್ ವಿಕ್ಷಣೆ ವಿವರಣೆಕಾರ. ಅದಕ್ಕೂ ಮುಂಚೆ ಭಾರತ ಕ್ರಿಕೆಟ್ ತಂಡದ ಪರ ಹಲವು ವರ್ಷಗಳ ಕಾಲ ಆಡಿದ ಅನುಭವಿ ಕ್ರಿಕೆಟಿಗ. ಜೊತೆಗೆ ಚಾಣಕ್ಷ.. ಟೀಮ್ ಮ್ಯಾನೇಜ್ ಮೆಂಟ್ ಹೇಗೆ ನಿರ್ವಹಿಸಬೇಕು ಎಂಬುದನ್ನು ರವಿಶಾಸ್ತ್ರಿಯವರ ಬಳಿ ಕಲಿಯಬೇಕಿದೆ. ಆಟಗಾರರ ವೀಕ್ ನೆಸ್, ಸ್ಟ್ರೇಂತ್ ಏನು ಎಂಬುದು ಗೊತ್ತು..
ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ನಾಯಕ. ಪಕ್ಕಾ ಮುಂಗೋಪಿ.. ಅಷ್ಟೇ ಒರಟ… ಆಕ್ರಮಣಕಾರಿ ಪ್ರವೃತ್ತಿ, ಹೋರಾಟದ ಛಲ-ಹಠ. ಕ್ರಿಕೆಟ್ ಮೇಲಿನ ಬದ್ಧತೆಯನ್ನು ಯಾರು ಕೂಡ ಪ್ರಶ್ನೆ ಮಾಡುವ ಹಾಗಿಲ್ಲ.
ಹೀಗೆ ಟೀಮ್ ಇಂಡಿಯಾದ ಗುರು -ಶಿಷ್ಯರ ಸಂಬಂಧ ಕೂಡ ಅಷ್ಟೇ ಚೆನ್ನಾಗಿತ್ತು. ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಒಂದೇ ನಾಣ್ಯದ ಎರಡು ಮುಖ ಎಂಬಂತೆ ಹೇಳಲಾಗುತ್ತಿದೆ. ಆದ್ರೂ ಕೊಹ್ಲಿಗಿಂತ ರವಿಶಾಸ್ತ್ರಿ ಮೇಲೆ ಕೆಲವೊಂದು ಟೀಕೆಗಳು, ಆರೋಪಗಳು ಇವೆ. ಆದ್ರೆ ತಂಡದ ಗೆಲುವು, ಯಶಸ್ಸು ಎಲ್ಲವನ್ನೂ ಮರೆಮಾಚುವಂತೆ ಮಾಡುತ್ತಿದೆ.
ಅದೆಲ್ಲಾ ಸರಿ.. ಇಬ್ಬರು ಘಟಾನುಘಟಿಗಳು. ಟೀಮ್ ಇಂಡಿಯಾದಲ್ಲಿ ಇವರಿಬ್ಬರನ್ನು ಯಾರು ಕೂಡ ಪ್ರಶ್ನೆ ಮಾಡುವ ಧೈರ್ಯ ಮಾಡುತ್ತಿಲ್ಲ. ಆದ್ರೆ ಬಿಸಿಸಿಐ ಅಧಿಕಾರಕ್ಕೆ ಇವರಿಬ್ಬರು ತಲೆಬಾಗಲೇಬೇಕಾಗುತ್ತಿತ್ತು. ಬಿಸಿಸಿಐ ಬಿಗ್ ಬಾಸ್ ಗಳ ಅಣತಿಯನ್ನು ಪ್ರಶ್ನೆ ಮಾಡುವ ಮಟ್ಟಿಗೆ ಹೋಗಿಲ್ಲ.
ಇನ್ನು ಆಯ್ಕೆ ಸಮಿತಿ.. ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿಯವರನ್ನು ಸಂಭಾಳಿಸುವುದು ಅಷ್ಟೊಂದು ಸುಲಭವಿಲ್ಲ. ಆಯ್ಕೆ ಸಮಿತಿ ಪ್ರಬಲವಾಗಿದ್ರೂ ಇವರಿಬ್ಬರ ಅನುಭವ ಮತ್ತು ಆಟದ ಖದರಿಗೆ ಹೆಚ್ಚು ಪ್ರಶ್ನೆ ಕೂಡ ಮಾಡುವಂಗಿಲ್ಲ.
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿಯವರನ್ನು ಯಾವ ರೀತಿ ಸಂಭಾಳಿಸುತ್ತಿದೆ ಎಂಬುದರ ಬಗ್ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಎಮ್.ಎಸ್. ಕೆ. ಪ್ರಸಾದ್ ಹೇಳಿಕೊಂಡಿದ್ದಾರೆ.
ಅನುಭವ ಮತ್ತು ಯಶಸ್ಸಿನ ಬಗ್ಗೆ ಮಾತನಾಡುವುದಾದ್ರೆ ಶಾಸ್ತ್ರಿ ಮತ್ತು ಕೋಹ್ಲಿಗಿಂತ ಎಮ್.ಎಸ್.ಕೆ. ಪ್ರಸಾದ್ ಸಾಕಷ್ಟು ಹಿಂದೆ ಇದ್ದಾರೆ. ಆದ್ರೂ ಎಮ್. ಎಸ್. ಕೆ. ಪ್ರಸಾದ್ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಬಲಿಷ್ಠ ತಂಡವನ್ನು ಕಟ್ಟಲು ಸಾಕಷ್ಟು ಶ್ರಮಪಟ್ಟಿದ್ದಾರೆ.
ಮುಲಾಜಿಗೆ ಬಗ್ಗದೆ, ಬೆದರಿಕೆಗೆ ಜಗ್ಗದೇ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಲು ಎಮ್. ಎಸ್. ಕೆ. ಪ್ರಸಾದ್ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆಯ್ಕೆ ವಿಚಾರದಲ್ಲಿ ಯಾವ ರಾಜಿನೂ ಮಾಡಿಕೊಂಡಿಲ್ಲ. ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ನಂತಹ ಮ್ಯಾಚ್ ವಿನ್ನರ್ ಗಳನ್ನು ಆಯ್ಕೆ ಮಾಡಿರೋದು ಎಮ್.ಎಸ್. ಕೆ. ಪ್ರಸಾದ್.
ಅಂದ ಹಾಗೇ ಎಮ್. ಎಸ್. ಕೆ. ಪ್ರಸಾದ್ ಸೌಮ್ಯ ಹಾಗೂ ಮೃದು ಸ್ವಭಾವದ ವ್ಯಕ್ತಿ. ಹಾಗಿದ್ದುಕೊಂಡು ಶಾಸ್ತ್ರಿ, ವಿರಾಟ್ ನಂತರ ಆಕ್ರಮಣಕಾರಿ ಪ್ರವೃತ್ತಿಯವರನ್ನು ಹೇಗೆ ಸಂಭಾಳಿಸಿದ್ರು ಎಂಬುದು ಪ್ರಶ್ನೆಯಾಗೇ ಉಳಿದಿದೆ.
ಇದೀಗ ಅದಕ್ಕೆಲ್ಲಾ ಉತ್ತರವನ್ನು ಪ್ರಸಾದ್ ನೀಡಿದ್ದಾರೆ. ಟೀಮ್ ಆಯ್ಕೆಯ ವೇಳೆ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಜೊತೆ ಸಾಕಷ್ಟು ಭಾರಿ ಸಹಜವಾಗಿಯೇ ಚರ್ಚೆ ಮಾಡಿದ್ದೇವೆ. ಕೆಲವೊಂದು ಬಾರಿ ವಿಕೋಪಕ್ಕೂ ಹೋಗಿದ್ದು ಉಂಟು. ಸಭೆಯಿಂದ ಹೊರನಡೆದಾಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿರಲಿಲ್ಲ. ಅಷ್ಟೊಂದು ಗಂಭೀರವಾದ ವಾದ ವಿವಾದಗಳು ನಡೆಯುತ್ತಿದ್ದವು ಎಂಬ ವಿಚಾರವನ್ನು ಎಮ್. ಎಸ್. ಕೆ. ಪ್ರಸಾದ್ ಬಹಿರಂಗಪಡಿಸಿದ್ದಾರೆ.
ಆದ್ರೆ ಇದೆಲ್ಲಾ ಆ ಕ್ಷಣಕ್ಕೆ.. ಆ ದಿನಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಮರುದಿನ ಮುಂಜಾನೆ ನಿನ್ನೆ ಏನು ನಡೆದಿಲ್ಲ ಎಂಬಂತೆ ಅದನ್ನು ಮರೆತು ಮಾತನಾಡುತ್ತಿದ್ದೇವೆ. ಯಾಕಂದ್ರೆ ನಾವು ಏನು ವಾದ ಮಾಡುತ್ತಿದ್ದೇವು ಎಂಬುದು ತಂಡದ ಹಿತಕ್ಕಾಗಿ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಿದ್ದರು. ಅವರು ವೃತ್ತಿಪರರಾಗಿದ್ದರು. ಹೀಗಾಗಿ ಅವರ ಜೊತೆ ಉತ್ತಮ ಸಂಬಂಧವನ್ನು ಹೊಂದಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಎಮ್. ಎಸ್. ಕೆ. ಪ್ರಸಾದ್ ಹೇಳಿದ್ದಾರೆ.
ಒಟ್ಟಿನಲ್ಲಿ ಎಮ್.ಎಸ್. ಕೆ. ಪ್ರಸಾದ್ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ತನ್ನ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ಜೊತೆಗೆ ಟೀಮ್ ಇಂಡಿಯಾದ ಯಶಸ್ಸಿನ ಹಿಂದೆ, ಯುವ ಆಟಗಾರರಿಗೆ ಅವಕಾಶವನ್ನು ಕಲ್ಪಿಸಿದ್ದಾರೆ.