ಸಿದ್ದಗಂಗಾ ಮಠದಲ್ಲಿ ಉಪವಾಸ ವೃತ ಬಿಟ್ಟ ಮುಸ್ಲಿಂ ಬಾಂಧವರು
ತುಮಕೂರು : ಪವಿತ್ರ ರಂಜಾನ್ ಹಬ್ಬದಲ್ಲಿ ಉಪವಾಸ ವೃತ ಮಾಡುತ್ತಿದ್ದು, ಮುಸ್ಲಿಂ ಬಾಂಧವರು ಸಿದ್ಧಗಂಗಾ ಮಠದಲ್ಲಿ ವೃತ ಬಿಟ್ಟು ಆಹಾರ ಸೇವಿಸಿದ್ದಾರೆ.
ರಂಜಾನ್ ಹಿನ್ನೆಲೆ ಶುಕ್ರವಾರದಂದು ಸಿದ್ಧಗಂಗಾ ಮಠದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಮಾಜಿ ಶಾಸಕ ರಫೀಕ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಮೆಹ್ರೋಜ್ ಖಾನ್ ಸೇರಿದಂತೆ ಹಿಂದೂ ಸಮುದಾಯದ ಹಿರಿಯರು ಉಪವಾಸ ಬಿಡುವ ಮೂಲಕ ಭಾವೈಕ್ಯತೆ ಮೆರದಿದ್ದಾರೆ.
ಸಂಜೆ ಶ್ರೀಮಠದ ಆವರಣದಲ್ಲಿ ಕುಳಿತ ಮುಸ್ಲಿಂ ಮುಖಂಡರು ಹಣ್ಣಿನ ರಸವನ್ನು ಸೇವಿಸುವ ಮೂಲಕ ತಮ್ಮ ದೈನಂದಿನ ಉಪವಾಸವನ್ನು ಸ್ಥಗಿತಗೊಳಿಸಿದರು. ಈ ವೇಳೆ ಮಾತನಾಡಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮುಸ್ಲಿಂ ಸಮುದಾಯದ ಮುಖಂಡರು ಮಠದೊಂದಿಗೆ ಇರಿಸಿಕೊಂಡಿರುವ ಭಾವನಾತ್ಮಕ ಸಂಬಂಧಗಳು ಅಜರಾಮರವಾಗಿರುತ್ತವೆ.
ಸಿದ್ಧಗಂಗಾ ಮಠವು ಸರ್ವಧರ್ಮ ಸಮನ್ವಯತೆಯನ್ನು ಸಾರುತ್ತಿರುವ ಮಠವಾಗಿದೆ. ಮಠದಲ್ಲಿ ಎಲ್ಲಾ ಸಮುದಾಯದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ, ಯಾವುದೇ ರೀತಿಯ ಜಾತಿ ಬೇಧವಿಲ್ಲದೇ ಮಠವು ಮುಂದುವರಿಯುತ್ತಿದೆ ಎಂದು ತಿಳಿಸಿದರು.