ಗಣಿಬಾಧಿತ ಪ್ರದೇಶದ ಮಹಿಳೆಯರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಮಹತಾಯಿ ಇನ್ನು ನೆನಪು ಮಾತ್ರ: Nagarathna kondli
ಇವರು ನಾಗರತ್ನಾ ಕೊಂಡ್ಲಿ. 2018ರಲ್ಲಿ ಆತ್ಮೀಯ ಗೆಳೆಯರೊಬ್ಬರ ಮುಖಾಂತರ ಪರಿಚಯವಾದವರು. ಇವರು ನಿವೃತ್ತ ಸರ್ಕಾರಿ ನೌಕರರಂತೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿಯ ಕೆಬಿ ಕ್ರಾಸ್ ಸಮೀಪದ ಕೊಂಡ್ಲಿ ಎಂಬ ಗ್ರಾಮದವರು ಮೂಲತಃ. ಎಲ್ಲರಂತೆ ಸಾಮಾನ್ಯವಾಗಿ ಇವರು ಬದುಕಬಹುದಿತ್ತು. ಆದರೆ ಯತ್ಕಿಂಚಿತ್ ಸಮಾಜದ ಋಣ ಸಂದಾಯ ಮಾಡಬೇಕೆನ್ನುವ ಅಪಾರ ಅಭಿಲಾಷೆ ಇವರದ್ದು. Nagarathna kondli
ತಮ್ಮ ನಿವೃತ್ತಿಯ ಹಣವನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಿರಾ ಮತ್ತು ಗುಬ್ಬಿ ತಾಲೂಕಿನ ಗಣಿಬಾಧಿತ ಪ್ರದೇಶಗಳ ಮಹಿಳೆಯರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ ಅಂತಿದ್ದರು. ಈ ಮಹಿಳೆಯರ ಪ್ರಗತಿಗಾಗಿ ಒಂದು ಟ್ರಸ್ಟ್ ನಿರ್ಮಿಸಿಕೊಂಡಿದ್ದರು “ಸಾಯಿ ನಾರಾಯಣ ಗ್ರಾಮ ಸೇವಾ ಟ್ರಸ್ಟ್” ಮಾಡಿಕೊಂಡು ಸಮಾಜದ ಕಟ್ಟಕಡೆಯ ವರ್ಗದ ಹೆಣ್ಣುಮಕ್ಕಳ ಕಣ್ಣೀರು ಒರೆಸಲು ಓಡಾಡುತ್ತಿದ್ದರು. “ಮಾತೃ ದೇಸಿ ಫುಡ್” ಎಂಬ ಸಂಸ್ಥೆ ನಿರ್ಮಿಸಿ ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು, ಮತ್ತದರಿಂದ ಬಂದ ಹಣವನ್ನು ಮಹಿಳೆಯರ ಕಲ್ಯಾಣಕ್ಕೆ ವಿನಿಯೋಗಿಸುವುದು. ಹೀಗೆ ಅವರಿಗಿದ್ದ ಒಂದೇ ಚಿಂತೆ ಗಣಿಬಾಧಿತ ಪ್ರದೇಶದ ಮಹಿಳೆಯರಿಗಾಗಿ ಏನಾದರೂ ಮಾಡಬೇಕು ಅನ್ನುವುದಷ್ಟೆ. ಹೀಗಾಗಿ ಸಂಬಳ ಕೊಟ್ಟು ನರ್ಸ್ ಇಟ್ಟು ಅನಾರೋಗ್ಯ ಪೀಡಿತ ಮಹಿಳೆಯರ ಆರೈಕೆ ಮಾಡುತ್ತಿದ್ದರು. ಅಲ್ಲಿನ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕು ಎಂದು ಸದಾ ಚಿಂತಿಸುತ್ತಿದ್ದರು.
ಅವರಿಗೆ ಟ್ರಸ್ಟ್ ಮಾಡಿಸಿಕೊಡಲು ನಾನು ಆತ್ಮೀಯ ಗೆಳೆಯರೂ, ಚಾರ್ಟೆಡ್ ಅಕೌಂಟೆಂಟ್ ಸಹ ಆಗಿರುವ ನಾಗರಬಾವಿಯ ದಿನೇಶ್ ಜೋಶಿಯವರ ಕಚೇರಿಯಿಂದ ತುಮಕೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯತನಕ ಜೊತೆಯಿದ್ದೆ. ಈ ಟ್ರಸ್ಟ್ ನ ಓರ್ವ ಟ್ರಸ್ಟಿ ಸಹ ಆಗಿದ್ದೆ. ಅವರು ಕರೆ ಮಾಡಿದಾಗಲೆಲ್ಲಾ ಮಹಿಳೆಯರಿಗಾಗಿ ರೂಪಿಸಿದ ಕಾರ್ಯಕ್ರಮಗಳು ಯೋಜನೆಗಳ ಬಗ್ಗೆಯೇ ಮಾತಾಡುತ್ತಿದ್ದರು. ವ್ಯಸನ ಮುಕ್ತ ಸಮಾಜದ ಕನಸು ಕಾಣುತ್ತಿದ್ದರು. ಮದ್ಯಪಾನ ನಿರೋಧ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು. ಸಾವಯವ ಸಿರಿಧಾನ್ಯ ಅಭಿಯಾನದ ಭಾಗವಾಗಿದ್ದರು. ಸುಸ್ಥಿರ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣ ಇವರ ಅಧಮ್ಯ ಬಯಕೆಯಾಗಿತ್ತು.
ಇತ್ತೀಚೆಗೆ ಸಹ ಕರೆ ಮಾಡಿದ್ದರು ಆದರೆ ನಾನು ಫೋನ್ ರಿಸೀವ್ ಮಾಡಿರಲಿಲ್ಲ ಮತ್ತೆ ಕಾಲ್ ಮಾಡಿದಾಗ ನಾಟ್ ರೀಚಬಲ್ ಆಗಿದ್ದರು. ಈಗ ಬರಸಿಡಿಲಿನಂತೆ ಈ ಸುದ್ದಿ ಬಂದಿದೆ. ಅನವರತ ಮಹಿಳೆಯರ ಕಷ್ಟಕಾರ್ಪಣ್ಯಗಳಿಗೆ ಮರುಗುತ್ತಿದ್ದ ಮಹಿಳೆಯರ ಕಲ್ಯಾಣಕ್ಕಾಗಿ ಹಾತೊರೆಯುತ್ತಿದ್ದ ನಿಸ್ವಾರ್ಥ ಜೀವನವೊಂದು ಕೊನೆಯಾಗಿದೆ. ಇಂದು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದ ಕಾರಣ ನಾಗರತ್ನ ಕೊಂಡ್ಲಿ ಮೇಡಂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೊಂಡ್ಲಿ ನಾಗರತ್ನಮ್ಮ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಇದಲ್ಲವೇ ಸಾರ್ಥಕ ಬದುಕು.
ನನಗೆ ತೀವ್ರ ಅನಾರೋಗ್ಯ ಕಾಡಿದ್ದ ಸಂದರ್ಭದಲ್ಲಿ, ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಗೆ ಬಂದಾಗ ಅವರು ಕಾಲ್ ಮಾಡಿ, ನಮ್ಮ ಹಳ್ಳಿಗೆ ಬಂದು ಎರಡು ತಿಂಗಳು ರೆಸ್ಟ್ ಮಾಡಿ. ವಾತಾವರಣ ಬದಲಾದರೇ ದೇಹಕ್ಕೂ ಮನಸಿಗೂ ಉತ್ತಮ ಎಂದಿದ್ದು ನೆನಪಾಗುತ್ತಿದೆ. ಈ ಕಾಲ ಅದೆಷ್ಟು ಕ್ರೂರ. ಮಾತುಗಳೇ ಹೊರಡುತ್ತಿಲ್ಲ. ಮಿಸ್ ಯೂ ಮೇಡಂ. ನಿಮ್ಮ ಆದರ್ಶಯುತ ಜೀವನ ಸದಾ ಕಾಲ ನಮ್ಮ ಸ್ಮರಣೆಯಲ್ಲಿರುತ್ತದೆ. ಆ ಸರ್ವಶಕ್ತ ಜಗನ್ಮಾತೆ ನಿಮ್ಮ ಪವಿತ್ರಾತ್ಮಕ್ಕೆ ಚಿರಶಾಂತಿ ಕರುಣಿಸಲಿ. ಓಂ ಶಾಂತಿ.
-ವಿಭಾ
***