ರಾಷ್ಟ್ರೀಯ ಬಾಕ್ಸಿಂಗ್: ಎಂಟರ ಘಟ್ಟ ತಲುಪಿದ ಮೊಹಮ್ಮದ್ ಹುಸಾಮುದ್ದೀನ್
ಬಳ್ಳಾರಿ: 2018 ಕಾಮನ್ ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಮೊಹಮ್ಮದ್ ಹುಸಾಮುದ್ದೀನ್ (57 ಕೆ.ಜಿ) ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ಸ್ ಗೆ ಶನಿವಾರ ಪ್ರವೇಶಿಸಿದ್ದಾರೆ.
ಹಾಲಿ ಚಾಂಪಿಯನ್ ಹುಸಾಮುದ್ದೀನ್, ಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (ಎಸ್ಎಸ್ಸಿಬಿ) ಪ್ರತಿನಿಧಿಸುತ್ತಿದ್ದು, ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಛತ್ತೀಸ್ಗಢದ ಸಾಹಿಲ್ ವಿರುದ್ಧ ಸ್ಪರ್ಧಿಸಿದ್ದರು.
ಈ ಪಂದ್ಯದಲ್ಲಿ ಆರಂಭದಲ್ಲಿ ಸಮಯೋಚಿತ ರಕ್ಷಣಾತ್ಮಕ ಆಟವಾಡಿದ ಅವರು ಎದುರಾಳಿಗೆ ನಿಖರ ಪಂಚ್ ಗಳನ್ನು ಹೊಡೆದು ಮಿಂಚಿದರು.
ಅಲ್ಲದೆ 5-0 ಯಿಂದ ಜಯ ಸಾಧಿಸಿ ಮುನ್ನಡೆ ಸಾಧಿಸಿದರು. ಎಂಟರ ಘಟ್ಟದ ಪಂದ್ಯದಲ್ಲಿನ ಹುಸಾಮುದ್ದೀನ್ ಮಹಾರಾಷ್ಟ್ರದ ರುಶಿಕೇಶ್ ಗೌಡ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಗೋವಾದ ರೋಶನ್ ಜಮೀರ್ (54 ಕೆ.ಜಿ) 3-2 ರಿಂದ ರಾಜಸ್ಥಾನದ ಸುರಜ್ ಬಹಾನ್ ಸಿಂಗ್ ಅವರನ್ನು ಮಣಿಸಿ ಮುನ್ನಡೆದರು.
ರಾಜಸ್ಥಾನದ ಭೀಮ್ ಪ್ರತಾಪ್ ಸಿಂಗ್ (51 ಕೆ.ಜಿ) ಹಾಗೂ ದೆಹಲಿಯ ರೋಹಿತ್ ಮೋರ್ (57 ಕೆ.ಜಿ) ತಮ್ಮ ತಮ್ಮ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
60 ಕೆ.ಜಿ ವಿಭಾಗದಲ್ಲಿ ತ್ರಿಪುರಾದ ಪೂನಿಯಾ 5-0ಯಿಂದ ತಮಿಳುನಾಡಿನ ಪ್ರಭು ಮುರಳಿ ಅವರನ್ನು ಸೋಲಿಸಿದರು.
ಈ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆ ಮಾಡಿದ ಆಟಗಾರ ಅಕ್ಟೋಬರ್ 24 ರಿಂದ ನವೆಂಬರ್ 6ರ ವರೆಗೆ ಸರ್ಬಿಯಾದಲ್ಲಿ ನಡೆಯುವ ಎಐಬಿಎ ಎಲೈಟ್ ಮೆನ್ಸ್ ವಲ್ಡ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ.