ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯರಂತಹ ನಾಯಕ ಅಗತ್ಯ : ಶಿಷ್ಯನ ಪರ ಹೆಚ್ ಡಿಡಿ ಬ್ಯಾಟ್
ಬೆಂಗಳೂರು : ರಾಷ್ಟ್ರ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರ್ತಾರಾ…? ಇದು ರಾಜ್ಯ ರಾಜಕಾರಣದಲ್ಲಿ ಹಾಗಾಗ ಸದ್ದು ಮಾಡುವ ಸುದ್ದಿ. ಹುಲಿಯಾ ಸಿದ್ದರಾಮಯ್ಯ ಬರಬೇಕು..! ಇದು ಸಿದ್ದರಾಮಯ್ಯ ಬೆಂಬಲಿಗರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಆಸೆ. ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ನೇಮಕ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿತ್ತು.
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಬರ್ತಾರೆ.. ಅವರು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಹೊ ಚೈತನ್ಯ ನೀಡ್ತಾರೆ ಅಂತ ಹೇಳಲಾಗುತ್ತಿತ್ತು. ಆದ್ರೆ ಇದು ಯಾವುದು ಆಗಲಿಲ್ಲ. ಇನ್ನು ಸಿದ್ದರಾಮಯ್ಯ ಅವರು ಕೂಡ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಿದ್ರು. ಅಲ್ಲದೇ ರಾಷ್ಟ್ರ ರಾಜಕಾರಣದತ್ತ ಹೋಗುವ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.
ಈ ಮಧ್ಯೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ದೇವೇಗೌಡರ ಪ್ರಕಾರ, ರಾಷ್ಟ್ರೀಯ ಕಾಂಗ್ರೆಸ್ ಗೆ ಸಿದ್ದರಾಮಯ್ಯರಂತಹ ನಾಯಕನ ಅಗತ್ಯವಿದೆಯಂತೆ. ಕಾಂಗ್ರೆಸ್ ಅನ್ನು ಸದೃಢಗೊಳಿಸಲು, ರಾಹುಲ್ ಗಾಂಧಿ ಅವರ ಕೈ ಬಲಪಡಿಸಲು ಸಿದ್ದರಾಮಯ್ಯ ಅವರಂತಹ ನಾಯಕರು ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಅಂತಾ ದೇವೇಗೌಡರು ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಬರ್ತಾರಾ ಅನ್ನೋ ಪ್ರಶ್ನೆಗೆ ಸ್ವತಃ ಅವರೇ ಉತ್ತರ ಕೊಡಬೇಕು.