ಡಿಸೆಂಬರ್ ತನಕ ಯಾವುದೇ ದೇಸಿ ಕ್ರಿಕೆಟ್ ಟೂರ್ನಿಗಳಿಲ್ಲ..!
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಬಿಸಿಸಿಐನ ಅಪೆಕ್ಸ್ ಸಮಿತಿಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದಿನ ಡಿಸೆಂಬರ್ ತನಕ ದೇಶಿ ಕ್ರಿಕೆಟ್ ಟೂರ್ನಿಗಳಿಗೆ ಕೋವಿಡ್-19 ಅಡ್ಡಿಯಾಗಿದೆ. ಸುರಕ್ಷತೆ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಡಿಸೆಂಬರ್ ತನಕ ಯಾವುದೇ ದೇಸಿ ಟೂರ್ನಿಗಳು ನಡೆಯುವುದಿಲ್ಲ ಎಂದು ಜುಲೈ 17ರಂದು ನಡೆದ ಬಿಸಿಸಿಐ ಅಪೆಕ್ಸ್ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಭಾಗವಹಿಸುತ್ತಿವೆ. ಹಾಗೇ ವಿವಿಧ ವಯೋಮಿತಿ ಟೂರ್ನಿಗಳು ನಡೆಯುತ್ತಿವೆ. ಈ ಟೂರ್ನಿಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿವೆ. ಆದ್ರೆ ಈಗ ತಂಡಗಳಿಗೆ ಪ್ರಯಾಣ ಬೆಳೆಸುವುದು ದೊಡ್ಡ ಕಷ್ಟವಾಗಲಿದೆ. ಹೀಗಾಗಿ ಬಿಸಿಸಿಐ ಈ ಸಂದರ್ಭದಲ್ಲಿ ಟೂರ್ನಿಯನ್ನು ಆಯೋಜನೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಪೆಕ್ಸ್ ಸಮಿತಿಗೆ ಹೇಳಿದೆ.
ಈ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಕೂಡ ಭಾಗಿಯಾಗಿದ್ದರು. ಜೈ ಶಾ ಅವರ ಅಧಿಕಾರಾವಧಿ ಕಳೆದ ತಿಂಗಳೇ ಮುಗಿದಿತ್ತು. ಅದೇ ರೀತಿ ಗಂಗೂಲಿಯವರ ಅಧಿಕಾರಾವಧಿ ಇದೇ ತಿಂಗಳ 27ಕ್ಕೆ ಅಂತ್ಯಗೊಳ್ಳಲಿದೆ.
ಬಿಸಿಸಿಐನ ಈ ನಿರ್ಧಾರದಿಂದ ವರ್ಷದ ಪ್ರತಿಷ್ಠಿತ ಟೂರ್ನಿಗಳಾದ ದುಲೀಪ್ ಟ್ರೋಫಿ, ರಣಜಿ ಟ್ರೋಫಿ, ಚಾಲೆಂಜರ್ಸ್ ಟೂರ್ನಿ ಸೇರಿದಂತೆ ಎಲ್ಲಾ ಟೂರ್ನಿಗಳಿಗೂ ಕೊರೋನಾ ಅಡ್ಡಿಪಡಿಸಿದೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ತವರಿನ ಸರಣಿಯೂ ನಡೆಯುವುದು ಅಸಾಧ್ಯವಾಗಿದೆ. ಈಗಾಗಲೇ ಟೀಮ್ ಇಂಡಿಯಾದ ಹಲವಾರು ತವರಿನ ಸರಣಿಗಳು ರದ್ದುಗೊಂಡಿವೆ.
ಈ ನಡುವೆ ಐಪಿಎಲ್ ಕೂಡ ಭಾರತದಲ್ಲಿ ನಡೆಯುವುದು ಅಸಾಧ್ಯವಾಗಿದೆ. ಹೀಗಾಗಿ ಬಿಸಿಸಿಐ ಯುಎಇನಲ್ಲಿ ಸಂಘಟಿಸುವ ಪ್ಲಾನ್ ಮಾಡಿಕೊಂಡಿದೆ. ಐಪಿಎಲ್ ಟೂರ್ನಿಯ ಆಯೋಜನೆಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಮೇಲೆ ಅವಲಂಬಿತವಾಗಿದೆ. ಟಿ-ಟ್ವೆಂಟಿ ವಿಶ್ವಕಪ್ ಬಗ್ಗೆ ಐಸಿಸಿ ಮುಂದಿನ ವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಇನ್ನು ಟೀಮ್ ಇಂಡಿಯಾ ಆಟಗಾರರ ಅಭ್ಯಾಸಕ್ಕಾಗಿ ಮೂರು ತಾಣಗಳನ್ನು ಆಯ್ಕೆ ಮಾಡಲಾಗಿದೆ. ಅಹಮಾದಬಾದ್, ಧರ್ಮಶಾಲಾ ಮತ್ತು ದುಬೈನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ ನಡೆಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.