ಒತ್ತಡವಿಲ್ಲ… ನಾನೇ ರಾಜೀನಾಮೆ ಸಲ್ಲಿಸಿದ್ದೇನೆ : ಯಡಿಯೂರಪ್ಪ
ಬೆಂಗಳೂರು : ನನಗೆ ಕೇಂದ್ರ ನಾಯಕರ ಯಾವುದೇ ಒತ್ತಡವಿಲ್ಲ. ಸ್ವ ಇಚ್ಛೆಯಿಂದ ನಾನೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ರಾಜೀನಾಮೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಬೇರೆ ಯಾರಿಗೂ ನೀಡದಂತಹ ವಿಶೇಷ ಅವಕಾಶವನ್ನು ನನಗೆ ನೀಡಿದ್ದರು. 75 ವರ್ಷ ತುಂಬಿದ್ದರೂ ನನಗೆ ಅವಕಾಶ ನೀಡಿದ್ದರು. ಅವರಿಗೆ ಧನ್ಯವಾದಗಳು. ನಾನು ರಾಜೀನಾಮೆ ನೀಡಬೇಕೆಂದು 2 ತಿಂಗಳ ಹಿಂದೆಯೇ ನಿರ್ಧಾರ ಮಾಡಿದ್ದೆ. ರಾಜೀನಾಮೆ ಬಗ್ಗೆ ನನಗೆ ಕೇಂದ್ರದಿಂದ ಯಾವುದೇ ಒತ್ತಡವಿಲ್ಲ. ನಾನು ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಬೇರೆ ರಾಜ್ಯಕ್ಕೆ ರಾಜ್ಯಪಾಲರಾಗುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ. ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ರಾಜ್ಯಪಾಲರಾಗುವ ಇಚ್ಛೆ ಇಲ್ಲ ಎಂದರು.
ಇನ್ನು ಮುಂದಿನ ಸಿಎಂ ಯಾರಾಗಬೇಕು ಎಂದು ನಾನು ಯಾರ ಹೆಸರನ್ನೂ ಸೂಚಿಸಿಲ್ಲ. ಅದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಬಿಎಸ್ ವೈ ತಿಳಿಸಿದ್ದಾರೆ.