ಮೈಸೂರು : ಮಾರಣಾಂತಿಕ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆದು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಶಾಸಕ ತನ್ವೀರ್ ಸೇಠ್ ಅವರು ಇಂದು ತಮ್ಮ ಎನ್.ಆರ್ ಕ್ಷೇತ್ರಕ್ಕೆ ಭೇಟಿ ನೀಡಿ, ಕೋವಿಡ್ ವಿಚಾರವಾಗಿ ಅಧಿಕಾರಿಗಳ ಜೊತೆ ಚರ್ಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅದಕ್ಕಾಗಿ ನಾನೇ ಬಂದಿದ್ದೇನೆ. ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳು ಮತ್ತು ನಗರ ಪಾಲಿಕೆ ಅಧಿಕಾರಿಗಳ ಸಭೆ ಮಾಡಿದ್ದೇನೆ. ಅವಶ್ಯಕತೆ ಇರುವ ಕಡೆ ಕೋವಿಡ್ ಆಸ್ಪತ್ರೆ ಮಾಡಲು ಕೆಲವು ಕಾಲೇಜುಗಳನ್ನು ಹುಡುಕಿದ್ದೇನೆ. ಎನ್ ಆರ್ ಕ್ಷೇತ್ರದಲ್ಲಿ 1000 ಕಿಟ್ ಕೊಟ್ಟಿದ್ದು, 600 ಕಿಟ್ ಬಳಕೆಯಾಗಿದೆ. ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಇನ್ನು ಕೊರೊನಾ ಭೀತಿಯ ಸಮಯದಲ್ಲಿ ರಾಜಕೀಯ ಬೇಡ, ರಾಜಕಾರಣ ಮಾಡುವ ಸಮಯ ಇದಲ್ಲ. ರಾಜಕೀಯವಾಗಿ ಉತ್ತರ ಕೊಡುವ ಸಂದರ್ಭದಲ್ಲಿ ಕೊಡೋಣ. ಇಲ್ಲಿ ವಿರೋಧ ಪಕ್ಷದವರು ತಮಗಾಗುವ ಸೇವೆ ಮಾಡುತ್ತಾರೆ, ನಾವು ನಮಗಾದ ಸೇವೆಯನ್ನು ಮಾಡೋಣ ಎಂದು ತನ್ವೀರ್ ಸೇಠ್ ಹೇಳಿದರು.