“ಸಿ.ಟಿ.ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಚೇರಿಯಲ್ಲಿ ಬಾರ್ ತೆರೆಯಿರಿ”
ಬೆಂಗಳೂರು : ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರ ಬದಲು ‘ಬಾರ್ ಸಲಹೆಗಾರ’ ಸಿಟಿ ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಛೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಉದ್ಯಮಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು ‘ಗೂಂಡಾರಾಜ್’ ಆಗಿ ಪರಿವರ್ತಿಸುತ್ತಿದೆ ಎಂದು ಟೀಕೆ ಮಾಡಿದೆ.
ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ , ಮಾನಪ್ಪ ವಜ್ಜಲ್ರ ಪುತ್ರರಿಂದ ಮಾರಣಾಂತಿಕ ಹಲ್ಲೆ ನಡೆದರೂ ದೂರು ದಾಖಲಿಸಲಿಲ್ಲ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು ‘ಗೂಂಡಾರಾಜ್’ ಆಗಿ ಪರಿವರ್ತಿಸುತ್ತಿದೆ ಎಂದು ದೂರಿದೆ.
ಹಿಂದೆ ಗೋವಿಂದ್ ಕಾರಜೋಳರ ಪುತ್ರ ಪೆÇಲೀಸರಿಗೆ ‘ಬಾಯಲ್ಲಿ ಬೂಟು ಇಡುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದ. ಇಂದು ಮಾನಪ್ಪ ವಜ್ಜಲ್ ಪುತ್ರರು ನಶೆಯಲ್ಲಿ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಪುತ್ರರನ್ನು ರೌಡಿಗಳನ್ನಾಗಿ ತಯಾರು ಮಾಡುತ್ತಿರುವಂತಿದೆ ಎಂದು ಲೇವಡಿ ಮಾಡಿದೆ.
ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರ ಬದಲು ‘ಬಾರ್ ಸಲಹೆಗಾರ’ ಸಿಟಿ ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಛೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ. ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ ಎಂದು ಕುಟುಕಿದೆ.