ಬೆಂಗಳೂರು : ರಾಜ್ಯದಲ್ಲಿ ನಾಳೆ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮತ (Vote) ಹಾಕಲು ಊರಿಗೆ ಆಗಮಿಸುತ್ತಿರುವ ಜನರು ಪರದಾಟ ನಡೆಸುವಂತಾಗಿದೆ.
ಚುನಾವಣೆಗೆ (Election) ಸಕಲ ಸಿದ್ಧತೆಗಳು ನಡೆದಿದ್ದು, ಬಿಎಂಟಿಸಿ (BMTC) ಮತ್ತು ಕೆಎಸ್ಆರ್ಟಿಸಿ (KSRTC) ಬಸ್ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಹೀಗಾಗಿ ಕೇವಲ 4,900 ಬಸ್ಗಳ ಸೇವೆಗಳಿದ್ದು, 3,700 ಬಸ್ಗಳು ಹಾಗೂ ಚಾಲಕರನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಸ್ವಗ್ರಾಮಕ್ಕೆ ತೆರಳುವವರು ಬಸ್ ಸಿಗದೇ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಹೀಗಾಗಿ ಬೆಂಗಳೂರಿನ ನೆಲಮಂಗಲ – ತುಮಕೂರು ರಸ್ತೆಯ ಜಾಸ್ ಟೋಲ್ ಹತ್ತಿರ ಪ್ರಯಾಣಿಕರು ಬಸ್ ಗಾಗಿ ಕಾಯುತ್ತಿ ನಿಂತಿದ್ದ ದೃಶ್ಯಗಳೇ ಹೆಚ್ಚಾಗಿದ್ದವು. ಮತದಾನ ಮಾಡುವ ಉತ್ಸಾಹದಲ್ಲಿ ಬಸ್ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಆಕ್ರೋಶದ ಕಟ್ಟೆ ಒಡೆದಿತ್ತು. ಬಿಸಿಲಿನಲ್ಲಿ ಪುಟ್ಟಪುಟ್ಟ ಮಕ್ಕಳನ್ನು ಎತ್ತಿಕೊಂಡು ಗಂಟೆಗಟ್ಟಲೆ ಬಸ್ ಸಿಗದೇ ಕಾದ ಪ್ರಸಂಗ ನಡೆಯಿತು.
ಇರುವ ಕೆಲವೇ ಕೆಲವು ಬಸ್ ಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಈ ಪರಿಸ್ಥಿತಿ ಕಂಡು ಹಲವರಂತೂ ಊರೇ ಬೇಡ ಎಂದು ಮರಳಿ ಮನೆಗೆ ತೆರಳಿದ್ದಾರೆ. ಹಲವರು ಬಸ್ ನ ಟಾಪ್ ಮೇಲೆ ಕುಳಿತು ಬಿಸಿಲಿನಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ.








