ಲೋಕಸಭೆಯಲ್ಲಿ ಮೇಕೆದಾಟು ಬಗ್ಗೆ ಪ್ರಶ್ನೆ ಕೇಳಿದ ಪ್ರಜ್ವಲ್
ನವದೆಹಲಿ : ಇಂದು ಲೋಕಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕರ್ನಾಟಕದ ಮೇಕೆದಾಟು ಯೋಜನೆ ವಿಚಾರ ಪ್ರಸ್ತಾಪಿಸಿ, ಯೀಜನೆಗೆ ತಮಿಳುನಾಡು ಅನುಮತಿ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಕಲಾಪದ ಪ್ರಶ್ನೋತ್ತರದ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪಿಸಿದ ಪ್ರಜ್ವಲ್ ರೇವಣ್ಣ, ‘ಕಾವೇರಿ ನ್ಯಾಯಾಧಿಕರಣ ಪ್ರಾಧಿಕಾರದ ಆದೇಶದಲ್ಲಿ ಕರ್ನಾಟಕಕ್ಕೆ ಅಲೊಕೇಟ್ ಆಗಿರುವ ನೀರಿಗಾಗಿ ಅಣೆಕಟ್ಟು ಕಟ್ಟಲು ಕೆಳಮಟ್ಟದಲ್ಲಿರುವ ರಾಜ್ಯಗಳ ಅನುಮತಿ ಪಡೆಯಬೇಕೆಂದು ಎಲ್ಲೂ ಬರೆದಿಲ್ಲ. ನಮಗೆ ನೀಡಲಾಗಿರುವ ನೀರಿನ ಪ್ರಮಾಣದಲ್ಲಿ ಯೋಜನೆ ಮಾಡುತ್ತಿದ್ದೇವೆ. ಪ್ರಾಧಿಕಾರದ ಅಥವಾ ಸುಪ್ರೀಂ ಕೋರ್ಟ್ ನ ಯಾವುದೇ ಆದೇಶವನ್ನು ಉಲ್ಲಂಘಿಸುತ್ತಿಲ್ಲ. ಆದ್ದರಿಂದ ತಮಿಳುನಾಡಿನ ಅನುಮತಿ ಪಡೆಯುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕೇಂದ್ರ ಜಲಶಕ್ತಿ ಸಚಿವರು, ಮೇಕೆದಾಟು ಅಣೆಕಟ್ಟು ಯೋಜನೆ ಡಿಪಿಆರ್ ಮಾಡಲು ಅನುಮತಿ ನೀಡಿದಾಗ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಅದರಲ್ಲಿ ಅಂತರರಾಜ್ಯ ನದಿ ಪ್ರದೇಶದಲ್ಲಿ ಮಾಡುವ ಯೋಜನೆ ಆದ್ದರಿಂದ ಕೆಳಮಟ್ಟದಲ್ಲಿರುವ ಎಲ್ಲಾ ರಾಜ್ಯಗಳ ಅನುಮತಿ ಪಡೆಯಬೇಕೆಂದು ಷರತ್ತು ಇತ್ತು ಎಂದಿದ್ದಾರೆ.
ಇತ್ತ ಮೇಕೆದಾಟು ಯೋಜನೆಗೆ ತಮಿಳುನಾಡು ಭಾರಿ ವಿರೋಧ ವ್ಯಕ್ತಪಡಿಸುತ್ತಿದೆ. ತಮಿಳುನಾಡು ರಾಜ್ಯ ಬಿಜೆಪಿಯ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ತಮಿಳುನಾಡು ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.