ದೇವರಾಜ ಅರಸು ಮಾರುಕಟ್ಟೆಯನ್ನ ನಾವೇ ಪುನಶ್ಚೇತನಗೊಳಿಸುತ್ತೇವೆ : ಪ್ರಮೋದಾ ದೇವಿ ಒಡೆಯರ್
ಮೈಸೂರು : ಮೈಸೂರಿನ ಪ್ರಸಿದ್ಧ ಮತ್ತು ಪಾರಂಪರಿಕ ದೇವರಾಜ ಅರಸು ಮಾರುಕಟ್ಟೆ ನೆಲಸ ಮಾಡುವುದು ಸರಿಯಲ್ಲ. ಸರಕಾರ ಸಹಕಾರದ ಭರವಸೆ ನೀಡಿದರೇ ನಾವೇ ಅದನ್ನು ಪುನಶ್ಚೇತನಗೊಳಿಸುತ್ತೇವೆ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹೇಳಿದರು
ಚಾಮುಂಡಿ ಬೆಟ್ಟದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಿರುವ ‘ಜಯಚಾಮರಾಜೇಂದ್ರ ಒಡೆಯರ್’ ಪ್ರತಿಮೆ ಅನಾವರಣಗೊಳಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರಾಜ ಮಾರುಕಟ್ಟೆ ನೆಲಸಮ ಮಾಡುವುದು ಬೇಡ. ಅದನ್ನು ಉಳಿಸಿಕೊಳ್ಳಲು ಯಾವುದೇ ತೊಂದರೆಯಿಲ್ಲ. ಇನ್ನೂ ಪಾರಂಪರಿಕ ತಜ್ಞರ ಸಮಿತಿಯಲ್ಲಿ ಎರಡು ಅಭಿಪ್ರಾಯ ವ್ಯಕ್ತವಾಗಿದೆ. ಸರಿಯಾದ ತಜ್ಞರನ್ನ ನೇಮಕ ಮಾಡಿ ಪರಿಶೀಲನೆ ಮಾಡಿದರೇ ಮಾರುಕಟ್ಟೆಯನ್ನ ಪುನಶ್ಚೇತನಗೊಳಿಸಬಹುದು. ಆ ಕೆಲಸವನ್ನ ಸರ್ಕಾರ ಮಾಡುವ ಭರವಸೆ ಇದೆ ಎಂದರು.
ಚಾಮುಂಡಿ ಬೆಟ್ಟದಲ್ಲಿ ರಾಜೇಂದ್ರ ವಿಲಾಸ್ ಪ್ಯಾಲೇಸ್ ಕೂಡ ಶಿಥಿಲಾವಸ್ಥೆಯಲ್ಲಿ ಇದ್ದು, ಅದನ್ನು ಪುನಶ್ಚೇತನಗೊಳಿಸುವ ಕೆಲಸವನ್ನ ನಾವು ಮಾಡುತ್ತೇವೆ. ಅದೇ ರೀತಿ ದೇವರಾಜ ಮಾರುಕಟ್ಟೆಯನ್ನ ಪ್ರಯತ್ನ ಮಾಡಿದರೇ ಉಳಿಸಿಕೊಳ್ಳಬಹುದು. ಸರ್ಕಾರ ಭರವಸೆ ನೀಡಿದರೇ ನಾವೇ ಪುನಶ್ಚೇತನಗೊಳಿಸುತ್ತೇವೆ. ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ಮೇಲೆ ಎಲ್ಲರಿಗೂ ಒಂದು ಎಮೋಷನ್ ಇದೆ ಎಂದು ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ಥಳಿಯನ್ನ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು 3 ಅಡಿ ಅಗಲ ಹಾಗೂ 3 ಅಡಿ ಉದ್ದವಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ಸ್ಥಳೀಯ ಶಾಸಕ ಜಿ ಟಿ ದೇವೇಗೌಡ ಸೇರಿ ಮತ್ತಿತರರು ಭಾಗಿಯಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಗ್ರಾಮಸ್ಥರು ಮಹಾರಾಜರ ಕೊಡುಗೆಯನ್ನ ಸ್ಮರಿಸುವ ಕೆಲಸ ಮಾಡಿದ್ದಾರೆ. ಅವರಿಗೆ ತಾಯಿ ಚಾಮುಂಡಿ ಒಳ್ಳೆಯದನ್ನ ಮಾಡಲಿ ಎಂದರು.