ಕಲಬುರಗಿ : ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸೇರಿದಂತೆ ಬಹುತೇಕ ಜನರ ಆರಾಧ್ಯ ದೈವ ಗಾಣಗಾಪುರದ (Ganapura) ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿ ರೌಡಿಯೊಬ್ಬ (Rowdy) ಭಕ್ತರ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ವಿವಿಧೆಡೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿದಿನ ಆಗಮಿಸುತ್ತಿರುತ್ತಾರೆ. ಆದರೆ, ದೇವಸ್ಥಾನದ ಸಂಗಮ ಸ್ಥಳದಲ್ಲಿ ಪುಡಿರೌಡಿ ಯಲ್ಲಪ್ಪ ಕಲ್ಲೂರ್ ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ ತೋರಿ, ಅಟ್ಟಹಾಸ ಮೆರೆದಿದ್ದಾನೆ.
ಗಾಣಗಾಪುರ ನಿವಾಸಿಯಾಗಿರುವ ಯಲ್ಲಪ್ಪ ಕಲ್ಲೂರ್, ಗಾಣಗಾಪುರದ ಸಂಗಮ ಸ್ಥಳದಲ್ಲಿರುವ ಔದುಂಬರ ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣಕ್ಕೆ ಭಕ್ತರು ಕುಳಿತ ಸಮಯದಲ್ಲಿಯೇ ಅವರ ತಲೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
40ಕ್ಕೂ ಅಧಿಕ ಪ್ರಕರಣಗಳು ಹೊಂದಿರುವ ಯಲ್ಲಪ್ಪ, ಕಳೆದ ಕೆಲವು ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡುತ್ತಿದ್ದಾನೆ. ದಬ್ಬಾಳಿಕೆ ನಡೆಸುತ್ತಿದ್ದಾನೆ. ಆದರೆ ಇದುವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಆಕ್ರೋಶ ಹೊರ ಹೊಮ್ಮಿದ ಹಿನ್ನೆಲೆಯಲ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.