ಮ್ಯೂಸಿಕ್ ಬಾಕ್ಸ್ ನಿಂದ ಅಪ್ಪು ಸಂಸ್ಮರಣೆಯ ಹಾಡುಗಳು
ಸದ್ಯ ಸ್ಯಾಂಡಲ್ ವುಡ್ ನಲ್ಲಿ ‘ಮ್ಯೂಸಿಕ್ ಬಾಕ್ಸ್’ ಆಡಿಯೋ ಸಂಸ್ಥೆ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಮ್ಯೂಸಿಕ್ ಬಾಕ್ಸ್ ಆಡಿಯೋ ಸಂಸ್ಥೆಯು 2022 ನೇ ಹೊಸ ವರ್ಷದ ಪ್ರಯುಕ್ತ ಪ್ರಾರಂಭಿಕ ಹಾಡುಗಳಾಗಿ ಪುನೀತ್ ಸಂಸ್ಮರಣೆಯ ಅಪ್ಪು ನೆನಪಿನ ‘ಪುನೀತನಾದೆ …’ ಹಾಗೂ ‘ತೆರೆಯಲಿ ಮೆರಗು ನಿನ್ನದೇ …’ ಎಂಬ ಗೀತೆಗಳನ್ನು ರಿಲೀಸ್ ಮಾಡಿದೆ. ಬಿಡುಗಡೆಗೊಂಡ ಈ ನೆನಪಿನ ಗೀತೆಗಳು 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಸಹ ಕಂಡಿವೆ.
ಪುನೀತನಾದೆ… ಗೀತೆಗೆ ಸಾಹಿತ್ಯ ಬರೆದಿರುವ ಸಾಹಿತಿ ದೊಡ್ಡರಂಗೇಗೌಡರವರು ‘ಪುನೀತ್ ಸಂಸ್ಮರಣೆ ನಿಮಿತ್ಯ ನನಗೆ ಹೊಸ ಅನುಭವ ಇದು. ಯಾಕೆ ಅಂದರೆ! ನಾನು ಉದಯಶಂಕರ್, ರಾಜನ್ ನಾಗೇಂದ್ರ, ವ್ಯಾಸರಾವ್ ಮುಂತಾದ ದಿಗ್ಗಜರೊಂದಿಗೆ ಪುನೀತ್ ಅವರನ್ನು ಮಗುವಾಗಿದ್ದಾಗಿನಿಂದ ಎತ್ತಿಮುದ್ದಾಡಿಸಿದ್ದೇನೆ. ಈಗ ಅವರ ಸಂಸ್ಮರಣೆ ಗೀತ ರಚನೆ ನನಗೆ ತುಂಬಾ ಗೌರವದೊಂದಿಗೆ ನೋವನ್ನು ತಂದು ಕೊಟ್ಟ ಸಂಗತಿಯಾಗಿದೆ. ಅವರ ಸಮಾಜ ಸೇವೆ, ಪ್ರಾಣಿ ದಯೆ, ಗೋರಕ್ಷಣೆಯಂತಹ ಸೇವೆಗಳಿಂದ ನಾನೂ ಕೂಡ ಪ್ರಭಾವಿತನಾಗಿದ್ದೇನೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್ರವರು, ‘ನಾನು ಅಣ್ಣಾವರ ಫ್ಯಾಮಿಲಿಯೊಂದಿಗೆ ‘ಜನ್ಮದ ಜೋಡಿ’ಯಿಂದ ನಂಟು ಹೊಂದಿದ್ದೇನೆ. ದೊಡ್ಡರಂಗೇಗೌಡರೊಂದಿಗೆ ಪುನೀತ್ ಬಗ್ಗೆ ಈ ಗೀತೆಯನ್ನು ಕನ್ನಡನಾಡಿಗೆ ಅರ್ಪಿಸಿದ್ದು, ನನಗೆ ಪುನೀತ್ ಬಗ್ಗೆ ವಿಶೇಷ ಗೌರವ ನಮನ ಸಲ್ಲಿಸಿರುವ ಭಾಗ್ಯ ನನ್ನದಾಗಿದೆ’ ಎಂದರು. ಈ ಸುಮಧುರ ಗೀತೆಗೆ ಅಜಯ್ ವಾರಿಯರ್ ರವರ ಗಾಯನವಿದೆ. ಇನ್ನೊಂದು ಹೃದಯ ಕಲಕುವಂತಹ ‘ತೆರೆಯಲಿ ಮೆರಗು ನಿನ್ನದೇ …’ ಗೀತೆಗೆ ಕೊಗುಂಡಿ ಪೆನ್ನಯ್ಯ- ಸಾಹಿತ್ಯ, ರಮೇಶ್ ಕೃಷ್ಣ- ಸಂಗೀತ ಹಾಗೂ ಕಾರ್ತಿಕ್ ನಾಗಲಪುರ ರವರ ಧ್ವನಿ ಇದೆ.
ಮ್ಯೂಸಿಕ್ ಬಾಕ್ಸ್ ಹಾಗೂ ಎರಡು ಗೀತೆಗಳ ಬಗ್ಗೆ ಮಾಹಿತಿ ನೀಡುವ ಸ್ಕೈಲೈನ್ ಸ್ಟುಡಿಯೋ ನ ದಿಲೀಪ್ ಕುಮಾರ್ ಮಾತನಾಡುತ್ತ ‘ಈ ಗೀತೆಗಳನ್ನು ಇನ್ಫ್ಯಾಂಟ್ ಸ್ಟುಡಿಯೊ ನಿರ್ಮಾಣ ಮಾಡಿದ್ದು, ಹಾಗೂ ಈ ಎರಡು ಗೀತೆಗಳು ಈಗಾಗಲೇ ಮ್ಯೂಸಿಕ್ ಬಾಕ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಿನಿಮಾ ಗೀತೆಗಳು, ಭಕ್ತಿ ಗೀತೆಗಳು ಹಾಗೂ ಯುವ ಪ್ರತಿಭೆಗಳ ಅಲ್ಬಮ್ ಸಾಂಗ್ಸ್ ಗಳಿಗಾಗಿ ಮಾರುಕಟ್ಟೆ ಕಲ್ಪಿಸಲು ಈ ಮ್ಯೂಸಿಕ್ ಬಾಕ್ಸ್ ಆಡಿಯೋ ಸಂಸ್ಥೆ ಸಿದ್ಧವಾಗಿದೆ. ಎಲ್ಲಾ ಮೀಡಿಯಾ ಬಾಂಧವರು, ಪತ್ರಿಕಾ ಮಾಧ್ಯಮದವರು ಪ್ರೋತ್ಸಾಹಿಸಿ, ನಿಮ್ಮ ಸಹಕಾರದಿಂದ ಹೊಸ ಪ್ರತಿಭೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.