ಕೃಪೆ – ಹಿಂದವಿ ಸ್ವರಾಜ್
ಒಂದು ಸಾವು ಇಡೀ ನಾಡನ್ನೇ ಖಿನ್ನತೆ ದೂಡಿಬಿಡಬಹುದಾದ ಘಟನೆ ಸಂಭವಿಸುವುದು ಅತೀ ವಿರಳ.
ಸತ್ತವನು ಒಬ್ಬ ಸಾಮಾನ್ಯ ಸಿನಿಮಾ ನಟ ಆದರೆ ಅತ್ತವರು ಮಾತ್ರ ಸಮಸ್ತ ಕನ್ನಡದ ಕುಲಕೋಟಿ.
ಯಾಕಂದರೆ ಆ ನಟ ದೊಡ್ಡಮನೆಯ ವಾರಾಸುದಾರ ಮಾತ್ರವೇ ಆಗಿರಲಿಲ್ಲ. ಆತನ ಪರೋಪಕಾರ,
ಸಮಾಜಮುಖಿ ಕೆಲಸಗಳು, ನೊಂದವರಿಗಾಗಿ ಮಿಡಿವ ಮೃದಯ, ಎಲ್ಲರಲ್ಲಿಯೂ ಬೆರೆವ ಅಜಾತಶತ್ರು
ಗುಣ, ವಿವಾದಗಳಿಂದ ದೂರವಿದ್ದ ನೇರವಂತಿಕೆ, ಅಹಂಕಾರವಿಲ್ಲದ ಸೌಜನ್ಯ, ಸದಾ ಮಿನುಗುತ್ತಿದ್ದ
ಮುಗುಳ್ನಗೆಯ ವದನ, ಹಿರಿಯರ ಬಗ್ಗೆ ಇದ್ದ ಅಪಾರ ಗೌರವ, ಇವೆಲ್ಲವೂ ಪುನೀತ್ ವ್ಯಕ್ತಿತ್ವವನ್ನು
ಸಿರಿವಂತಗೊಳಿಸಿತ್ತು. ಸಂಸ್ಕೃತಿ, ಸಂಸ್ಕಾರ ಮತ್ತು ವಿನಯವಂತಿಕೆಯ ಸಮ್ಮಿಲನವಾಗಿದ್ದರು ಅಪ್ಪು.
ಹೀಗಿದ್ದ ಆದರ್ಶಯುತ ರಾಜ್ ಪುತ್ರ ಏಕಾಏಕಿ ಯಾವುದೇ ಕಾರಣಗಳಿಲ್ಲದೇ ಸತ್ತೇ ಹೋಗುತ್ತಾರೆ
ಅನ್ನುವುದು ಯಾರಾದರೂ ಅರಗಿಸಿಕೊಳ್ಳಲು ಸಾಧ್ಯವೇ? ಮನೆಯ ಹಿರಿಮಗನೇ ಹೋಗಿಬಿಟ್ಟನೇನೋ
ಅನ್ನುವಷ್ಟರಮಟ್ಟಿಗೆ ಸಂಕಟ ಪಟ್ಟಿತ್ತು ಕರುನಾಡು. ಈ ಸಲದ ರಾಜ್ಯೋತ್ಸವವಾಗಲೀ,
ದೀಪಾವಳಿಯಾಗಲೀ ಕನ್ನಡಿಗರಲ್ಲಿ ಸಂಭ್ರಮ ತಂದಿಲ್ಲ. ಈಗ ತಾನೇ ನಾಡು ಅಸಾಧ್ಯ ವೇತನದಿಂದ
ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಶರಣರ ಕೀರ್ತಿಯನ್ನು ಮರಣದಲ್ಲಿ ಕಾಣಬೇಕೆನ್ನುತ್ತಾರೆ
ದೊಡ್ಡವರು. ಮಹಾತ್ಮ ಗಾಂಧಿಯ ಅಂತ್ಯಸಂಸ್ಕಾರಕ್ಕೆ ಈ ಪ್ರಮಾಣದ ಜನಸಾಗರ ಹರಿದು
ಬಂದಿತ್ತಂತೆ. ಈಗ ಪುನೀತ್ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಬಂದಿದ್ದು
ಬರೋಬ್ಬರು 25 ಲಕ್ಷ ಜನ.
ಪುನೀತ್ ಸಾವಿನ ನಂತರ ನಿಜಕ್ಕೂ ಒಂದಷ್ಟು ಶ್ಲಾಘನೀಯ ಬೆಳವಣಿಗೆಗಳಾಗಿವೆ. ಸ್ಯಾಂಡಲ್ವುಡ್ನ
ಸ್ಟಾರ್ ನಟರು ಇನ್ನು ಕಿತ್ತಾಡಿದ್ದು ಸಾಕು ಒಂದಾಗಿರೋಣ, ಪ್ರೀತಿಸೋಣ, ಪರಸ್ಪರ ಗೌರವಿಸೋಣ
ಎನ್ನುವ ತೀರ್ಮಾನಕ್ಕೆ ಬಂದರೆ ಅಭಿಮಾನಿ ವಲಯವೂ ನಾವೂ ಸಹ ಕಿತ್ತಾಡಿಕೊಳ್ಳದೇ
ಒಗ್ಗಟ್ಟಾಗಿದ್ದರೇ ಮಾತ್ರ ಆ ಮನುಷ್ಯನ ಆತ್ಮಕ್ಕೆ ಶಾಂತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ
ಪೋಸ್ಟ್ ಹಾಕುತ್ತಿದ್ದಾರೆ. ಅತ್ತ ತಮಿಳಿನ ವಿಶಾಲ್ ಪುನೀತ್ ಓದಿಸುತ್ತಿದ್ದ 1800 ಮಕ್ಕಳ
ಜವಾಬ್ದಾರಿ ಇನ್ನು ನನ್ನದು ಎಂದು ನಿಜಕ್ಕೂ ದೊಡ್ಡ ತನ ಮೆರೆದಿದ್ದಾರೆ. ತೆಲುಗು, ಮರಾಠಿ,
ಮಲೆಯಾಳಂ ಸಿನಿ ಉದ್ಯಮದ ಸ್ಟಾರ್ ನಟರು ಪುನೀತ್ರಂತೆ ಸಾಧ್ಯವಾದಷ್ಟು ಸಮಾಜಸೇವೆ
ಮಾಡಬೇಕು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಇಡೀ ಜಗತ್ತಿನ ಮಾಧ್ಯಮಗಳು ಪುನೀತ್ ನಟನೆಂದು
ಚಿತ್ರಿಸದೇ ಸಮಾಜದ ಕಷ್ಟ ಕಾರ್ಪಣ್ಯಕ್ಕೆ ಮಿಡಿದ ಪರೋಪಕಾರಿ ಜೀವ ಎಂದು ವರ್ಣಿಸುತ್ತಿವೆ.
ಇದಲ್ಲವೇ ಬದುಕಿನ ಸಾರ್ಥಕತೆ. ಸ್ವರ್ಗದಲ್ಲಿ ರಾಜ್ಕುಮಾರ್ ಮತ್ತು ಪಾರ್ವತಮ್ಮ ದಂಪತಿ
ಮಗನನ್ನು ಅಕ್ಕರೆಯಿಂದ ಅಭಿಮಾನದಿಂದ ಹೆಮ್ಮೆ ಗರ್ವಗಳಿಂದ ಬಾಚಿ ತಬ್ಬಿಕೊಂಡಿರಬಹುದು.
ಈ ಗೊಂದಲ ನೋವು ಸಂಕಟಗಳ ಮಧ್ಯೆ ಹಾನಗಲ್-ಸಿಂದಗಿ ಉಪಚುನಾವಣೆ ನಡೆದಿದ್ದೂ ಫಲಿತಾಂಶ
ಪ್ರಕಟವಾಗಿದ್ದೂ ಗೊತ್ತೇ ಆಗಲ್ಲ. ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ
ದಿಕ್ಸೂಚಿಯಾಗಿದ್ದ ಉಪಚುನಾವಣೆ ಅಧಿಕಾರರೂಢ ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆ ತೆನೆ ಹೊತ್ತ
ಮಹಿಳೆಗೂ ಭವಿಷ್ಯದ ಅಂದಾಜು ಸೂಚಿಸುವ ಚುನಾವಣೆಯಾಗಿತ್ತು. ಎರಡೂ ಕ್ಷೇತ್ರಗಳಲ್ಲಿ ಆಡಳಿತ
ವಿರೋಧಿ ಅಲೆ ಕೆಲಸ ಮಾಡಿದ್ದು ಸ್ಪಷ್ಟ. ಕ್ಷೇತ್ರದ ಕೆಲಸ ಮಾಡದೇ ಮನೆಯಲ್ಲಿ ಹೊದ್ದು ಮಲಗಿದ್ದ
ಎರಡೂ ಪ್ರಭಾವಿ ಕುಟುಂಬಗಳನ್ನು ಮತದಾರ ಪ್ರಭು ಮುಲಾಜಿಲ್ಲದೇ ತಿರಸ್ಕರಿಸಿದ್ದಾನೆ. ಮುಂದಿನ
ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷದ ಯಾವ ನಾಯಕನ ಮ್ಯಾಜಿಕ್ಗಳೂ ವರ್ಕೌಟ್
ಆಗಲ್ಲ. ಕೆಲಸ ಮಾಡಿದ್ದರೇ ಮಾತ್ರ ಮತ ಕೇಳಲು ಬಾ, ಇಲ್ಲವಾದರೆ ಮುಖ ತೋರಿಸಬೇಡ ಎಂದು
ಖಡಕ್ಕಾಗಿ ಹೇಳಿದ್ದಾನೆ ಮತದಾರ. ಇದೇ ಸಂದೇಶ ಉಂದಿನ ದಿನಗಳಲ್ಲೂ ಮತದಾರರಿಂದ ರೂ ಜೆಸಿಬಿ
ಪಕ್ಷಗಳಿಗೆ ರವಾನೆಯಾಗಲಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ ಅನ್ನುವ
ಮುನ್ಸೂಚನೆಯಿದು. ಮೋದಿ ಹೆಸರೇಳಿದರೇ ಕತ್ತೆ ನಾಯಿ ಹಂದಿ ನಿಲ್ಲಿಸಿದರೂ ಗೆದ್ದು ಬರುತ್ತದೆ
ಅನ್ನುವ ಭ್ರಮೆಗಳಿಂದ ಬಿಜೆಪಿ ಹೊರಬರಬೇಕಿದೆ. ಇನ್ನು ಕಾಂಗ್ರೆಸ್ ಪಾಳೆಯದಲ್ಲೂ ಈ
ಉಪಚುನಾವಣೆಯಲ್ಲಿ ತೋರಿದ ಒಗ್ಗಟ್ಟು ಮುಂದುವರೆಸಿಕೊಂಡು ಹೋಗಬೇಕಿದೆ.
ರಾಷ್ಟ್ರ ರಾಜಕಾರಣದಲ್ಲೂ ಮಹತ್ತರ ಬದಲಾವಣೆಗಳಾಗುತ್ತಿವೆ. ಹಿಂದೂ ಧರ್ಮದ ಸಂರಕ್ಷಣೆಗಾಗಿ
ಉದ್ಭವಿಸಿದ ಅವತಾರ ಪುರುಷ ಎಂದು ಹಗಲೂ ರಾತ್ರಿ ಗುಣಗಾನ ಮಾಡುತ್ತಿದ್ದರಲ್ಲ ಅದೇ ನರೇಂದ್ರ
ಮೋದಿಯವರು, ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪೋಪ್ ಧಿರಿಸಿನಲ್ಲಿ
ಕಾಣಿಸಿಕೊಂಡಿದ್ದು ಕೆಲವು ಭಕ್ತರಿಗೆ ಬಿಸಿ ತುಪ್ಪ ಬಾಯಲ್ಲಿಟ್ಟುಕೊಂಡ ಹಾಗಾಗಿದೆ. ಇತ್ತ ಗೋವಾದ
ಸಾಂಪ್ರದಾಯಿಕ ಮತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗೌಡಸಾರಸ್ವತ ಬ್ರಾಹ್ಮಣರಿಗೆ,
ಕ್ಯಾಥೋಲಿಕ್ ಕ್ರಿಶ್ಚಿಯನ್ನರಿಗೆ, ವಲಸಿಗ ಮುಸಲ್ಮಾನರಿಗೆ ಪ್ರತ್ಯೇಕ ತೀರ್ಥ ಕ್ಷೇತ್ರ ಪ್ರವಾಸದ ಫ್ರೀ
ಪ್ಯಾಕೇಜ್ ಘೋಷಿಸುವ ಮೂಲಕ ಅರವಿಂದ್ ಕೇಜ್ರೀವಾಲ್ ತಮ್ಮ ಅಸ್ಥಿತ್ವದ ಸೂಚನೆ
ನೀಡುತ್ತಿದ್ದಾರೆ. ಅಲ್ಲಿ ಪಂಜಾಬಿನಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ನ
ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ತಮ್ಮ ಹೊಸ ಪಕ್ಷಕ್ಕೆ ಪಂಜಾಬ್ ಲೋಕ್ ಕಾಂಗ್ರೆಸ್
ಎಂದು ನಾಮಕರಣ ಮಾಡಿದ್ದಾರೆ. ಸೋನಿಯಾ, ರಾಹುಲ್ ವಿರುದ್ಧದ ತಮ್ಮ ಅಸಮಧಾನವನ್ನು 7
ಪುಟಗಳ ರಾಜೀನಾಮೆಯಲ್ಲಿ ವಿವರಿಸಿದ್ದಾರೆ. ಒಬ್ಬ ಅವಿವೇಕಿ ನವಜೋತ್ ಸಿಂಗ್ ಸಿದು ಮಾತು
ಕೇಳಿದ ಕಾಂಗ್ರೆಸ್ ಪಂಜಾಬ್ನಲ್ಲಿ ಅಕ್ಷರಶಃ ಆತ್ಮಹತ್ಯೆ ಮಾಡಿಕೊಂಡಿತೆಂದರೆ ತಪ್ಪಲ್ಲ. ಈಗಾಗಲೇ
ಕ್ಯಾಪ್ಟನ್ ತಮ್ಮ ಕೆಲವು ಶರತ್ತುಗಳು ಈಡೇರಿಸುವುದಾದರೆ ಬಿಜೆಪಿ ಜೊತೆ ಮೈತ್ರಿ
ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ರಾಜಸ್ತಾನದಲ್ಲಿಯೂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್
ಪೈಲೆಟ್ ನಡುವಿನ ಶೀತಲ ಸಮರ ಸರಿ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿಲ್ಲ. ಇವೆಲ್ಲ ಸಾಲು
ಸಾಲು ಕಾಂಗ್ರೆಸ್ ವೈಫಲ್ಯಗಳೇ ಬಿಜೆಪಿಗೆ ಸುವರ್ಣವಕಾಶ ಮೊಗೆಮೊಗೆದು ಕೊಡುತ್ತಿವೆ ಅಷ್ಟೆ.
ಕೋವಿಡ್ ಮೂರನೆಯ ಅಲೆ ಆಗ ಬರುತ್ತೆ ಈಗ ಬರುತ್ತೆ ಎಂದು ಹುಲಿ ಬಂತು ಹುಲಿ ಕಥೆ ಹೇಳಿತಲ್ಲ
ಸರ್ಕಾರ ಈಗೇಕೆ ಕರೋನಾ ಮಹಾಮಾರಿಯ ಉಸಿರೆತ್ತುತ್ತಿಲ್ಲ. ನನ್ನ ಮಟ್ಟಿಗೆ ಕೋವಿಡ್ ಸರ್ಕಾರದ
ಅಂಕೆಯಂತೆ ಕುಣಿಯುವ ಸೂತ್ರದ ಗೊಂಬೆ. ಕರ್ನಾಟಕದ ಉಪಚುನಾವಣೆಯೇನೋ ಮುಗಿಯಿತು,
ಇನ್ನೇನು ಸಾಲು ಸಾಲು ಚುನಾವಣೆಗಳಿವೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್
ಚುನಾವಣೆಗಳನ್ನು ನಡೆಸಬೇಕು, ಬಿಬಿಎಂಪಿ ಚುನಾವಣೆ ಆಗಬೇಕು. ಕೆಲವೇ ತಿಂಗಳಲ್ಲಿ ಗೋವಾದ
ಮತ್ತು ಉಳಿದ ರಾಜ್ಯಗಳ ಚುನಾವಣೆಯಿದೆ. ಕೇಂದ್ರಕ್ಕಾಗಲೀ ರಾಜ್ಯಕ್ಕಾಗಲೀ ಚುನಾವಣೆ ಸುಗ್ಗಿ
ಬಂದಾಗ ಕರೋನಾ ರಜೆ ತೆಗೆದುಕೊಂಡು ಚೀನಾಕೆ ಟೂರ್ ಹೋಗಿಬಿಡುತ್ತದೆ. ನೋಡಿ ಈಗ
ಆಗಿರುವುದೂ ಅದೇ, ಚೀನಾದಲ್ಲಿ ಮೂರನೆಯ ಅಲೆಯ ಸಾಂಕ್ರಾಮಿಕ ಹಬ್ಬುವಿಕೆಯ ತೀವ್ರತೆಯ
ಕಾರಣ 10 ಪ್ರಾಂತ್ಯಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ.
ಹಸಿವಿನ ಸೂಚ್ಯಂಕ, ಬಡತನದ ಸೂಚ್ಯಂಕ, ನಿರುದ್ಯೋಗದ ಸೂಚ್ಯಂಕದಲ್ಲಿಯೂ ಭಾರತ ಕನಿಷ್ಠ
ಬಾಂಗ್ಲಾದೇಶಕ್ಕಿಂತ ಕೆಳಗೆ ಇಳಿದಿದೆ. ಹಿಂದೆ ಯಾವ ಕಾಲದಲ್ಲಿಯೂ ದೇಶ ಇಷ್ಟು ದುಸ್ಥಿತಿ
ಕಂಡಿರಲಿಲ್ಲ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯನ್ನು ಯೋಚಿಸಿದರೇ ತಲೆ ಸಿಡಿದು
ಹಾರುತ್ತದೆ. ದೀಪಾವಳಿಗೆ ಮುನ್ನ ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿ ಎಲ್ಪಿಜಿ ಸಿಲಿಂಡರ್ಗಳ
ಬೆಲೆಯನ್ನು ಬರೋಬ್ಬರಿ 266 ರೂಪಾಯಿ ಹೆಚ್ಚಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ
ಮೊದಲು ₹1,734 ದರವಿದ್ದ 19 ಕೆಜಿಯ ವಾಣಿಜ್ಯ ಸಿಲಿಂಡರ್ಗಳ ಬೆಲೆ ನವೆಂಬರ್ 1ರಿಂದ
₹2,000.50 ಆಗಿದೆ. ಕೋವಿಡ್ ಸಂಕಷ್ಟದಿಂದ ತತ್ತರಿಸಿದ್ದ ಮಧ್ಯಮ ವರ್ಗದ ಹೋಟೆಲ್
ಉದ್ಯಮಿಗಳು ಈಗಂತೂ ಪೂರ್ತಿಯಾಗಿ ಮೇಲೇಳರದಂತೆ ಮಲಗಿಬಿಟ್ಟಿದ್ದಾರೆ. ಮೊನ್ನೆ ಹೋಟೆಲ್
ಉದ್ಯಮ ಕ್ಷೇತ್ರದಲ್ಲಿರುವ ಗೆಳೆಯನೊಬ್ಬ ಹೇಳುತ್ತಿದ್ದ ಕೇವಲ ಬೆಂಗಳೂರು ಒಂದರಲ್ಲೇ
2000ದಷ್ಟು ಸಣ್ಣ ಮಟ್ಟದ ಭರಣಿ, ದರ್ಶಿನಿಗಳು ಮಾರಾಟಕ್ಕಿವೆಯಂತೆ. ದೊಡ್ಡ ಹೋಟೆಲ್ಗಳ
ಮಾಲೀಕರು ತಮ್ಮ ಬಹುತೇಕ ಶಾಖೆಗಳನ್ನು ವಹಿಸಿಕೊಡಲು ಅಥವಾ ಶಾಶ್ವತವಾಗಿ ಮುಚ್ಚಿಬಿಡಲು
ಯೋಚಿಸುತ್ತಿದ್ದಾರೆ. ಕಾರಣ ಗಗನಕ್ಕೇರಿದ ಅಡುಗೆ ಅನಿಲದ ಬೆಲೆ. ಒಂದು ಸಲ ಹೊರಗೆ ಮಾರುಕಟ್ಟೆಗೆ
ಹೋಗಿ, ಆಟೋ-ಟ್ಯಾಕ್ಸಿ ಚಾಲಕನನ್ನೋ, ಸೊಪ್ಪು ಮಾರುವ ಮುದುಕಿಯನ್ನೋ, ಹಣ್ಣು ಹಂಪಲು
ಮಾರುವ ಮಧ್ಯವಯಸ್ಕನನ್ನೂ, ಮೀರು ಮಾರುವ ಗಿರಜಕ್ಕನನ್ನೋ, ಮಾಂಸದಂಗಡಿಯ
ಸಾಬಣ್ಣನನ್ನೋ, ಹೋಲ್ಸೇಲ್ ಮಾರವಾಡಿಯನ್ನೋ, ರೀಟೇಲ್ ಶೆಟ್ಟಿಯನ್ನೋ,
ಚಪ್ಪಲಿಯಂಗಡಿಯ ರಫೀಕನನ್ನೋ ಮಾತಾಡಿಸಿ ನೋಡಿ. ಒಬ್ಬನೇ ಒಬ್ಬ ತಾನು
ನೆಮ್ಮದಿಯಾಗಿದ್ದೀನಿ ಎನ್ನಲಾರ. ಈ ದೇಶದಲ್ಲಿ ನೆಮ್ಮದಿಯಾಗಿರುವ ಇಬ್ಬರೇ ವ್ಯಕ್ತಿಗಳು ಯಾರು
ಅನ್ನುವುದು ನಿಮಗೇ ಗೊತ್ತಿದೆ. ಆ ಇಬ್ಬರು ವ್ಯಕ್ತಿಗಳ ಉದ್ಧಾರಕ್ಕಾಗಿ ದೇಶದ ನೂರಾಮೂವತ್ತು
ಕೋಟಿ ಜನರನ್ನು ಸಂಕಷ್ಟಿಕ್ಕೀಡು ಮಾಡಿದ ಮಹಾತ್ಮರ ಹೊಟ್ಟೆ ತಣ್ಣಗಿರಲಿ. ಉಳಿದಂತೆ ನಮ್ಮ
ಮಧ್ಯಮವರ್ಗದ ನಿತ್ಯದ ಬದುಕಿನ ಹೋರಾಟ ತುತ್ತಿನ ಚೀಲ ತುಂಬಿಸಿಕೊಳ್ಳುವ ಹೆಣಗಾಟ ಈ
ಜನ್ಮದಲ್ಲಿ ಮುಗಿಯುವಂತದ್ದಲ್ಲ. ಬಡವ ಹೇಗೋ ಬದುಕಿಕೊಳ್ಳುತ್ತಾನೆ, ಶ್ರೀಮಂತನಿಗೆ
ಇದ್ದಿದ್ದನ್ನು ಉಳಿಸಿಕೊಂಡರೆ ಸಾಕು ಬದುಕು ನಡೆದುಹೋಗುಯತ್ತದೆ. ಆದರೆ ಈ ದೇಶ ಕಟ್ಟಿದ 100
ಕೋಟಿಗೂ ಹೆಚ್ಚಿನ ಮಧ್ಯಮ ವರ್ಗವಿದೆಯಲ್ಲ, ನಿಜಕ್ಕೂ ಬದುಕು ದುರ್ಭರ, ಬರ್ಬರ ಇವರಿಗೇ.
ತಿಂಗಳು ತಿಂಗಳಿಗೆ ಹಾಲು, ದಿನಸಿ, ಪೇಪರ್, ವಿದ್ಯುತ್ ಬಿಲ್, ಮೊಬೈಲ್ ಬಿಲ್, ಟಿವಿ ರೀಚಾರ್ಜ್
ಮುಂತಾದ ಅಗತ್ಯ ಖರ್ಚು ಹೊಂದಿಸುವಷ್ಟರಲ್ಲಿ ಕೂದಲು ನೆರೆತು ಬೆಳ್ಳಗಾಗಿ ಉದುರಿಯೂ
ಹೋಗಿರುತ್ತದೆ. ಎನಿ ವೇ ಈ ಸಂಪಾದಕೀಯದ ಕೊನೆಯಲ್ಲಿ ಒಂದು ಮಾತನ್ನು ಹೇಳಲೇಬೇಕು. ನಮ್ಮ
ಜನ್ಮಕ್ಕೆ ಒಂದು ಉದ್ದೇಶವಿದ್ದರೂ ನಮ್ಮ ಇವತ್ತು ಬದುಕುತ್ತಿರುವ ಬದುಕು ಮಾತ್ರ ನೀರಿನ ಮೇಲಣ
ಗುಳ್ಳೆಯಂತೆ ಅನಿಶ್ಚಿತ. ಯಾವತ್ತು ಬಲ್ಬ್ ಆರಿಹೋಗುತ್ತದೋ ಬಲ್ಲವರಾರು. ಇರುವಷ್ಟು ದಿನ
ದ್ವೇಷ ಮರೆತು ಪ್ರೀತಿಯಿಂದ ವಿಶ್ವಾಸದಿಂದ ನಾಲ್ಕು ಜನ ಬಯದುಕೊಳ್ಳದಂತೆ ಬದುಕೋಣ ಬಿಡಿ.
ನಾಳೆ ನಾವು ಸತ್ತರೂ ನಮ್ಮ ನೆರಳನ್ನು ಜನ ನಾಲ್ಕು ದಿನ ನೆನಪಿಟ್ಟುಕೊಂಡರೆ ಸಾಕು, ಅಷ್ಟೇ ಬದುಕಿನ
ಸಾರ್ಥಕತೆ. ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗ್ತೀನಿ, ನಮಸ್ತೇ..
ನಿಮ್ಮವ ವಿಭಾ