ಚಿತಾಗಾರ ಸಿಬ್ಬಂದಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ ರಾಗಿಣಿ..!
ಬೆಂಗಳೂರು : ದೇಶವೇ ಕೊರೊನಾ ಹೆಮ್ಮಾರಿಯ ಕಪಿ ಮುಷ್ಠಿ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿ ಬಂದಿದೆ. ಈ ನಡುವೆ ಬಡವರು , ಬಡ ಸೋಂಕಿತರು ಚಿಕಿತ್ಸೆ ಸಿಗದೇ , ಬೆಡ್ ಕೊರತೆ , ಆಕ್ಸಿಜನ್ ಕೊರತೆಯಿಂದ ಸಾಯುತ್ತಿದ್ದಾರೆ. ಮತ್ತೊಂದೆಡೆ ಕೊರೊನಾ ವಾರಿಯರ್ಸ್ ಹಗಲಿರುಳು ಕಷ್ಟ ಪಡುತ್ತಿದ್ದಾರೆ.
ಕೊರೊನಾ ವಾರಿಯರ್ಸ್ ಲಿಸ್ಟ್ ನಲ್ಲಿ ಚಿತಾಗಾರದ ಸಿಬ್ಬಂದಿಯೂ ಬರುತ್ತಾರೆ. ಕೊರೊನಾದಿಂದಾಗಿ ಪ್ರತಿದಿನ ರಾಜ್ಯದಲ್ಲಿ 200ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಚಿತಾಗಾರಗಳ ಮುಂದೆ ಹೆಣಗಳ ಸಾಲು ನಿರ್ಮಾಣವಾಗಿದೆ. ಆರೋಗ್ಯ ಸಿಬ್ಬಂದಿ ಹಗಲು ಇರುಳೆನ್ನದೆ ಕಷ್ಟಪಡುತ್ತಿರುವಂತೆ ಚಿತಾಗಾರದ ಸಿಬ್ಬಂದಿಯೂ ಶ್ರಮಿಸುತ್ತಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅನೇಕ ಸಿನಿ ತಾರೆಯರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ. ಇದೀಗ ಡ್ರಗ್ಸ್ ಪ್ರಕರಣ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟಿ ರಾಗಿಣಿ ಚಿತಾಗಾರದ ಸಿಬ್ಬಂದಿಗಳಿಗೆ ಸಹಾಯ ಮಾಡ್ತಿದ್ದಾರೆ. ಚಿತಾಗಾರದ ಸಿಬ್ಬಂದಿಗೆ ಹಾಗೂ ಸ್ಮಶಾನದಲ್ಲಿ ಗುಂಡಿ ತೋಡುವ ಸ್ಮಶಾನ ನೋಡಿಕೊಳ್ಳುವ ವ್ಯಕ್ತಿಗಳಿಗೆ ನೆರವಾಗಲು ಮುಂದಾಗಿದ್ದಾರೆ. ಅಲ್ಲಿ ವಾಸಿಸುವವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ರಾಗಿಣಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಮಾಹಿತಿ ಹಂಚಿಕೊಂಡಿರುವ ರಾಗಿಣಿ ಸ್ಮಶಾನವೊಂದರಲ್ಲಿ ಕಿಟ್ ವಿತರಿಸಬೇಕಾದರೆ ಆ ಸ್ಮಶಾನದಲ್ಲಿಯೇ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ವಾಸವಿದ್ದ ಅಜ್ಜಿಯೊಬ್ಬರೊಂದಿಗೆ ಚರ್ಚೆ ಮಾಡಿದ ಬಗ್ಗೆ ತಿಳಿಸಿದ್ದಾರೆ. ‘ಅವರ ಕತೆ ಕೇಳಿ ನನಗೆ ಆಶ್ಚರ್ಯವಾಯಿತು. 40 ವರ್ಷಗಳಿಗೂ ಹೆಚ್ಚು ಸಮಯದಿಂದ ಆ ಮಹಿಳೆ ಸ್ಮಶಾನದಲ್ಲಿಯೇ ಇದ್ದಾರೆ. ಹೊರಗೆ ಹೋಗೇ ಇಲ್ಲ. ಹೊರಗಿನ ಪ್ರಪಂಚದ ಅರಿವು ಸಹ ಅವರಿಗೆ ಇಲ್ಲ. ಅವರ ಮಗಳು ಒಮ್ಮೆಯೂ ಪುಸ್ತಕ ಮುಟ್ಟಿಲ್ಲ ಅಮ್ಮ ಮಾಡುವ ಕಾರ್ಯವನ್ನೇ ಆಕೆಯೂ ಮಾಡುತ್ತಿದ್ದಾಳೆ’ ಎಂದಿದ್ದಾರೆ.
‘ಕೋವಿಡ್ ಪೀಡಿತರನ್ನು ಸುಡುತ್ತಿದ್ದ ಸ್ಥಳಕ್ಕೆ ನಾವು ಹೋಗಲಿಲ್ಲ. ಅಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಿಗಿದ್ದಿದ್ದರಿಂದ ನಾವು ಆ ಕಡೆಗೆ ಹೋಗಲಿಲ್ಲ. ಆದರೆ ಅಲ್ಲಿ ಸಾಲಾಗಿ ನಿಂತಿದ್ದ ಆಂಬುಲೆನ್ಸ್ಗಳ ಸಾಲುಗಳನ್ನು ನೋಡಿ ನಮಗೆ ಆತಂಕವಾಯಿತು’ ಎಂದಿದ್ದಾರೆ. ಅಂದ್ಹಾಗೆ ರಾಗಿಣಿ ಈ ರೀತಿ ಸಹಾಯ ಮಾಡ್ತಿರುವುದು ಇದೇನು ಮೊದಲಲ್ಲ.. ಈ ಹಿಂದೆ ಡ್ರಗ್ ಪ್ರಕರಣದಲ್ಲಿ ಸಿಲುಕುವ ಮುನ್ನವೂ ಕೊರೊನಾ ಟೈಮ್ ನಲ್ಲಿ ಅವಶ್ಯಕತೆ ಇರುವವರಿಗೆ ಉಚಿತ ಆಹಾರ ವಿತರಣೆ, ದಿನಸಿ ವಿತರಣೆ, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವಿತರಣೆ ಮಾಡಿದ್ದರು.