ನಿರೀಕ್ಷೆ ಹುಸಿಗೊಳಿಸುತ್ತಿರುವ ಗಿಲ್.. ಅವಕಾಶಕ್ಕಾಗಿ ಕಾಯುತ್ತಿದ್ದಾರೆ ರಾಹುಲ್, ಮಯಾಂಕ್…!
ಶುಬ್ಮನ್ ಗಿಲ್.. ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಆಟಗಾರ. ಆಸ್ಟ್ರೇಲಿಯಾ ಸರಣಿಯಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಗಿಲ್ ಇಂಗ್ಲೆಂಡ್ ಸರಣಿಯಲ್ಲಿ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.
ಚೆನ್ನೈ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಅರ್ಧಶತಕ ದಾಖಲಿಸಿದ್ದ ನಂತರ ಶುಬ್ಮನ್ ಗಿಲ್ ಅವರ ಬ್ಯಾಟ್ ನಿಂದ ರನ್ ಗಳು ಹರಿದು ಬಂದಿಲ್ಲ.
0, 14, 11,15 ಮತ್ತು 0 ರನ್ ಗಳನ್ನು ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಗಳಿಸಿರುವುದನ್ನು ನೋಡಿದಾಗ ಶುಬ್ಮನ್ ಗಿಲ್ ಅವರು ಒತ್ತಡಕ್ಕೆ ಸಿಲುಕಿದ್ದಾರೆ ಅಂತ ಅನ್ನಿಸುತ್ತಿದೆ.
ಹಾಗೇ ನೋಡಿದ್ರೆ ಶುಬ್ಮನ್ ಗಿಲ್ ಅವರ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ಪಂಡಿತರು ಕೂಡ ಫಿದಾ ಆಗಿದ್ದರು. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಅಂತನೇ ಬಿಂಬಿಸಲಾಗಿತ್ತು.
ಇದೀಗ ಶುಬ್ಮನ್ ಗಿಲ್ ಅವರ ಬ್ಯಾಟಿಂಗ್ ವೈಖರಿಯನ್ನು ಪ್ರಶ್ನೆ ಮಾಡಲಾಗುತ್ತಿದೆ. ಅದ್ರಲ್ಲೂ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಗಿಲ್ ಒತ್ತಡಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.
ಆದ್ರೆ ಈ ಒತ್ತಡವನ್ನು ನಿಭಾಯಿಸಿಕೊಂಡು ಗಿಲ್ ಮುನ್ನಡೆಯಬೇಕಿದೆ. ಯಾಕಂದ್ರೆ ಸಿಕ್ಕ ಅವಕಾಶವನ್ನು ಗಿಲ್ ಸರಿಯಾಗಿ ಬಳಸಿಕೊಳ್ಳಬೇಕು. ಇನ್ನೊಂದೆಡೆ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ನಂತಹ ಆಟಗಾರರು ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಈ ಹಿಂದೆ ಪೃಥ್ವಿ ಶಾ ಕೂಡ ಗಿಲ್ ಗಿಂತ ಅತ್ಯುತ್ತಮ ಮಟ್ಟದಲ್ಲಿ ಗಮನ ಸೆಳೆದಿದ್ದರು. ಆದ್ರೆ ಗಾಯ, ನಿಷೇಧ ಮತ್ತು ಕೆಟ್ಟ ಫಾರ್ಮ್ ನಿಂದಾಗಿ ತಂಡದಿಂದ ಹೊರ ನಡೆದಿದ್ದರು. ಇದೀಗ ತಂಡದಲ್ಲಿ ಸ್ಥಾನ ಪಡೆಯಲು ಪೃಥ್ವಿ ಶಾ ಪರದಾಡುತ್ತಿದ್ದಾರೆ.
ಹೀಗಾಗಿ ಶುಬ್ಮನ್ ಗಿಲ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಪ್ರತಿಭೆ ಇದ್ರೂ ತಾಂತ್ರಿಕವಾಗಿ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಆಡುವ ಕಲೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದೇ ದೊಡ್ಡ ಸಾಧನೆ. ಅದ್ರಲ್ಲೂ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅಂದ್ರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಹಾಗಾಗಿ ಸಿಕ್ಕ ಅವಕಾಶವನ್ನು ಪ್ರತಿಯೊಬ್ಬ ಆಟಗಾರರು ಬಳಸಿಕೊಳ್ಳಲೇಬೇಕು. ಆದ್ರೆ ಸಾಲು ಸಾಲು ವೈಫಲ್ಯಗಳನ್ನು ಅನುಭವಿಸಿದಾಗ ಒತ್ತಡಕ್ಕೆ ಸಿಲುಕಿ ತಂಡದಿಂದ ಹೊರನಡೆಯಬೇಕಾಗುತ್ತದೆ.
ಒಂದು ಬಾರಿ ತಂಡದಿಂದ ಹೊರ ನಡೆದ್ರೆ ಮತ್ತೆ ತಂಡದಲ್ಲಿ ಸ್ಥಾನ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ.