ಹ್ಯಾಪಿ ಬರ್ತ್ ಡೇ ರಾಹುಲ್ ದ್ರಾವಿಡ್.. ಮಹಾ ಗ್ರಂಥದ ಸವಿನೆನಪು
ಇಂದು ವಿಶ್ವ ಕ್ರಿಕೆಟ್ ಜಗತ್ತಿನ ಬುದ್ಧ ರಾಹುಲ್ ದ್ರಾವಿಡ್ ಅವರ ಜನ್ಮದಿನ. ಜಾಮ್ಮಿ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾ ಮೂಲಕ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್… ಸದ್ಯ ಟೀಂ ಇಂಡಿಯಾದ ದ್ರೋಣಾಚಾರ್ಯರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮುನ್ನಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಉಸ್ತುವಾರಿಯಾಗಿ. ಅದಕ್ಕೂ ಮುನ್ನ ಭಾರತ ಎ ತಂಡ, ಭಾರತ 19 ವಯೋಮಿತಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇನ್ನು ಸ್ವಲ್ಪ ಫ್ಲಾಷ್ ಬ್ಯಾಕ್ ಮಾಡಿದಾಗ ರಾಹುಲ್ ದ್ರಾವಿಡ್ ಅವರ ನಿಜವಾದ ಅವತಾರಗಳ ದೃಶ್ಯಗಳು ಒಂದು ಕ್ಷಣ ಕಣ್ಣ ಮುಂದೆಯೇ ಹಾದು ಹೋಗುತ್ತವೆ.
ಅದನ್ನು ನೆನಪಿಸಿಕೊಂಡಾಗ ಅಬ್ಬಾ..! ಇಂತಹ ಒಬ್ಬ ಆಟಗಾರ ನಮ್ಮಲ್ಲಿದ್ದ. ವಿಶ್ವದ ಶ್ರೇಷ್ಠ ಬೌಲರ್ಗಳ ತಾಳ್ಮೆಯನ್ನು ಪರೀಕ್ಷೆ ಮಾಡಿದ್ದ ಬ್ಯಾಟ್ಸ್ ಮೆನ್ ಅಂತ ಉದ್ಘಾರ ಬರುತ್ತದೆ. ಯಾಕಂದ್ರೆ ದ್ರಾವಿಡ್ ಅವರ ಬ್ಯಾಟಿಂಗ್ ವೈಭವವೇ ಅಂತಹುದ್ದು. ಕ್ರಿಕೆಟ್ ಆಟದ ಗ್ರಾಮರ್ಗಳು ಅವರ ಬ್ಯಾಟಿಂಗ್ ಶೈಲಿಯಲ್ಲಿ ಅಳವಡಿಸಿಕೊಂಡಿವೆ. ಯಾವುದೇ ಅಪೇಕ್ಷೆ, ಪ್ರತಿಫಲವನ್ನು ಬಯಸದೇ ಇರುವಂತಹ ಆಟಗಾರ. ಆಸೆಯೇ ದುಃಖಕ್ಕೆ ಮೂಲ ಅನ್ನುವಂತೆ ಕ್ರಿಕೆಟ್ ನನ್ನ ಬದುಕಿನ ಮೂಲ ಎಂಬುದನ್ನು ಮೈಗೂಡಿಸಿಕೊಂಡಿರುವ ರಾಹುಲ್ ದ್ರಾವಿಡ್, ವಿಶ್ವ ಕ್ರಿಕೆಟ್ ನ ಬುದ್ಧ ಎಂದರೇ ತಪ್ಪಾಗಲಾರದು.
ಹೌದು..! ನೂಲಿನಲ್ಲಿ ಗೆರೆ ಎಳೆದಂತೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಟಚ್ ಮಾಡುವ ಕಲಾತ್ಮಕ ಬ್ಯಾಟ್ಸ್ ಮೆನ್ . ಬೌಲರ್ ಗಳು ತಾಳ್ಮೆ ಕಳೆದುಕೊಳ್ಳುವಂತೆ ಕಾಡುವ ಹಾಗೂ ವಿಕೆಟ್ ಪಡೆಯಲು ಎದುರಾಳಿ ತಂಡ ಬೇಡುವಂತೆ ಮಾಡುವ ಜಾಯಮಾನ ನಮ್ಮ ಜ್ಯಾಮಿಯದ್ದು. ಇಂತಹ ಸ್ಟೈಲೀಸ್ ಪ್ಲೇಯರ್ ನ ಆಟ ಈಗ ನೆನಪು ಮಾತ್ರ. ಜಂಟಲ್ ಮೆನ್ ಗೇಮ್ ನ ಜಂಟಲ್ ಮೆನ್ ಆಟಗಾರನನ್ನು ಒಂದು ಕ್ಷಣ ನೆನಪಿಸಿಕೊಂಡಾಗ ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣ ಮುಂದೆ ಅವರ ಬ್ಯಾಟಿಂಗ್ ವೈಯಾರಗಳು ಹಾದು ಹೋಗುತ್ತವೆ. ಅಂತಹ ಜೀನಿಯಸ್ ಕ್ರಿಕೆಟಿಗನ ಕ್ರಿಕೆಟ್ ಬದುಕೇ ಒಂದು ಮಹಾನ್ ಗ್ರಂಥ.
ರಾಹುಲ್ ದ್ರಾವಿಡ್ ಕ್ರಿಕೆಟ್ ಬದುಕಿನ ಮಹಾನ್ ಗ್ರಂಥದ ಒಂದೊಂದು ಸವಿ ಸವಿ ನೆನಪುಗಳ ಅಧ್ಯಾಯಗಳು ಅನಾವರಣಗೊಂಡಾಗ ಅಚ್ಚರಿಯಾಗುತ್ತೆ. ತಪಸ್ಸು ಮಾಡುವ ಮುನಿಯಂತೆ ರಾಹುಲ್ ದ್ರಾವಿಡ್ ಕ್ರಿಕೆಟ್ ಅಟವನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ್ರು. ಊಟ, ನಿದ್ದೆ, ಕುಟುಂಬ ಹೀಗೆ ಎಲ್ಲವನ್ನೂ ಬಿಟ್ಟು ದ್ರಾವಿಡ್ ಕ್ರಿಕೆಟ್ ಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ರು. ಅದರ ಪರಿಣಾಮವೇ ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ನಲ್ಲಿ ಎಂದೂ ಮರೆಯದ ಕ್ರಿಕೆಟಿಗನಾದ್ರು. ಹಾಗಿದ್ರೆ ದ್ರಾವಿಡ್ ಯಶಸ್ಸಿನ ಗುಟ್ಟು ಏನು ? ಈ ಪ್ರಶ್ನೆಗೆ ಉತ್ತರ ತುಂಬಾನೇ ಸರಳ. ಜವಾಬ್ದಾರಿ ಮತ್ತು ಕ್ರಿಕೆಟ್ ಮೇಲಿನ ಅಪಾರ ಪ್ರೀತಿ.
ಇದೇ ಪ್ರೀತಿಯಿಂದಾಗಿ ರಾಹುಲ್ ದ್ರಾವಿಡ್ ಕ್ರಿಕೆಟ್ ಗೆ ವಿದಾಯ ಹೇಳಿದರೂ, ಕ್ರಿಕೆಟ್ ಬೆಳವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಬಳಿಕ ರಾಹುಲ್, ಭಾರತೀಯ ಕಿರಿಯ ತಂಡದ ಕೋಚ್ ಆಗಿದ್ದರು. ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.