ಲಕ್ನೋ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಉತ್ತರ ಪ್ರದೇಶದಲ್ಲಿ (Uttar Pradesh) ಚಪ್ಪಲಿ ಹೊಲಿಯುವ ಚಮ್ಮಾರ (Cobbler) ರೊಬ್ಬರ ಅಂಗಡಿಗೆ ದಿಢೀರ್ ಎಂದು ಭೇಟಿ ನೀಡಿದ್ದಾರೆ.
ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಹಾಜರಾಗಿ ಮರಳಿ ಲಕ್ನೋಗೆ ತೆರಳುವ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬವರ ಅಂಗಡಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಚಪ್ಪಲಿಯನ್ನು ಸರಿಪಡಿಸುವ ಪ್ರಯತ್ನವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ.
ಸುಮಾರು 30 ನಿಮಿಷಗಳ ಕಾಲ ರಾಮ್ ಚೈತ್ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ಇಬ್ಬರೂ ಪಾನೀಯ ಸೇವಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ರಾಮ್ ಚೈತ್ ಅವರ ಸಮಸ್ಯೆಗಳನ್ನು ಪರಿಹರಿಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಕುರಿತು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ದಾರಿಯಲ್ಲಿ ಕಾರನ್ನು ನಿಲ್ಲಿಸಿ ಚಮ್ಮಾರರ ಕುಟುಂಬವನ್ನು ಭೇಟಿಯಾದರು. ಶ್ರಮಜೀವಿಗಳ ಹಕ್ಕುಗಳಿಗಾಗಿ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಬೀದಿಗಳಿಂದ ಸಂಸತ್ತಿನವರೆಗೆ ಧ್ವನಿ ಎತ್ತುತ್ತಿದ್ದೇವೆ. ಅವರ ಪ್ರಸ್ತುತ ಸುರಕ್ಷಿತ ಮತ್ತು ಭವಿಷ್ಯವನ್ನು ಸಮೃದ್ಧಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಬರೆದುಕೊಂಡಿದೆ. ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಪ್ರಚಾರದ ಸಂದರ್ಭದಲ್ಲಿ ರಾಯ್ ಬರೇಲಿಯಲ್ಲಿರುವ ಕ್ಷೌರಿಕನ ಅಂಗಡಿಗೆ ಭೇಟಿ ನೀಡಿ ಕ್ಷೌರ ಮಾಡಿಸಿಕೊಂಡು ತಮ್ಮ ಗಡ್ಡವನ್ನು ಕೂಡ ಟ್ರಿಮ್ ಮಾಡಿಸಿಕೊಂಡಿದ್ದರು.








