ಪಾಪ ರಮೇಶ್ ಜಾರಕಿಹೊಳಿ ಅಮಾಯಕ : ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು : ಪಾಪ ರಮೇಶ್ ಜಾರಕಿಹೊಳಿ ಅಮಾಯಕರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಮಾತನಾಡಿದ ಅವರು, ಪಾಪ ರಮೇಶ್ ಜಾರಕಿಹೊಳಿ ಅಮಾಯಕರಿದ್ದಾರೆ, ರಾಜಕಾರಣಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು. ನಮ್ಮ ತಂದೆ ಕಾಲದಿಂದಲೂ ಇಂತಹ ಕೆಲಸ ಮಾಡುತ್ತಿಲ್ಲ. ಸಿಡಿ ಮುಂದಿಟ್ಟುಕೊಂಡು ನಾವೆಂದೂ ರಾಜಕೀಯ ಮಾಡಿಲ್ಲ. ಆ ಹೆಣ್ಣು ಮಗಳು ಸಂತ್ರಸ್ತೆಯಾಗಿದ್ದರೆ, ನಿಜಕ್ಕೂ ಕಿರುಕುಳ ಆಗಿದ್ದರೆ ಏಕೆ ಸಮಾಜದ ಮುಂದೆ ಬರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ ಹೆಣ್ಣು ಮಗಳ ವಿಡಿಯೋ ಬಂದಿದೆ. ಹೀಗಾಗಿ ಅವರ ಕುಟುಂಬಸ್ತರೋ, ಸಂತ್ರಸ್ತೆಯೋ ಅಥವಾ ನಕಲಿ ಅಂತಿರುವ ರಮೇಶ್ ಜಾರಕಿಹೊಳಿ ಸಂತ್ರಸ್ತರೋ ನೀವೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ಹೆಚ್ಚರದಲ್ಲಿ ನಾವಿರಬೇಕು. ಮಹಾಭಾರತ ಹಾಗೂ ರಾಮಾಯಣ ಯಾವ ಕಾರಣಕ್ಕೆ ಆಯ್ತು? ಇದೆಲ್ಲಾ ಗಂಡು ಹೆಣ್ಣಿನಿಂದ ಅಲ್ಲವೇ.. ದಿನೇಶ್ ಕಲ್ಲಳ್ಳಿ ಮೇಲೆ ನಾನು ಹಣದ ವಿಚಾರವಾಗಿ ಏನು ಹೇಳಿಲ್ಲ. ಅವರು ಏಕೆ ಆ ರೀತಿ ನನ್ನ ಮೇಲೆ ದೂರು ಹೇಳಿ ವಾಪಸ್ ತೆಗೆದುಕೊಂಡರು ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಹೆಚ್ ಡಿಕೆ ಉತ್ತರಿಸಿದ್ರು.
ಇದೇ ವೇಳೆ ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದರ ಬಗ್ಗೆ ಮಾತನಾಡಿ, 12 ಜನ ಮುಂಬೈಗೆ ಹೋಗಿದ್ದರು. ಅಲ್ಲಿ ಆ ಪುಣ್ಯಾತ್ಮರು ಏನು ಮಾಡಿದ್ದಾರೋ? ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಯಾರೂ ಇಳಿಯಬಾರದು. 6 ಜನ ಸಚಿವರು ನ್ಯಾಯಾಲಯಕ್ಕೆ ಹೋದಾಗ ಗೋವಾ, ಮುಂಬೈ, ಹೈದರಾಬಾದ್ ಸುತ್ತಾಡಿದ್ದರು. ಆಗ ಏಕೆ ಇವರು ಕೋರ್ಟ್ ಮೊರೆ ಹೋಗಿರಲಿಲ್ಲ. ಇಂತಹವರನ್ನು ನಂಬಿ ರಾಜಕಾರಣ ಮಾಡಬೇಕಾಗಿತ್ತಾ? ಎಂದು ಪ್ರಶ್ನಿಸಿದ್ದಾರೆ.
ನೀವು ತಪ್ಪು ಮಾಡಿಲ್ಲ ಎಂದರೆ ಯಾಕೆ ನ್ಯಾಯಾಲಯಕ್ಕೆ ಹೋಗಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಿಮ್ಮ ಮುಖಕ್ಕೆ ನೀವೆ ಮಸಿ ಬಳಿದುಕೊಳ್ಳುತ್ತಿದ್ದೀರಿ. ನಾನು ಕೂಡ ತಪ್ಪು ಮಾಡಿದ್ದೇ ಎಂದು ವಿಧಾನ ಸಭೆಯ ಕಲಾಪದಲ್ಲೇ ಹೇಳಿದ್ದೆ. ಅದನ್ನ ತಿದ್ದುಕೊಂಡು ಬದುಕಬೇಕು ಎಂದು ಹೇಳಿದ್ರು.