ಚಿತ್ರದುರ್ಗ ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕೊರತೆ : ಶ್ರೀರಾಮುಲು
ಚಿತ್ರದುರ್ಗ : ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕೊರತೆ ಇದೆ. ಪ್ರತೀ ನಿತ್ಯ 1100 ರೆಮಿಡಿಸಿವಿರ್ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕೊರತೆ ಇದೆ. ಪ್ರತೀ ನಿತ್ಯ 1100 ರೆಮಿಡಿಸಿವಿರ್ ಅಗತ್ಯವಿದೆ.
ಸರ್ಕಾರದಿಂದ 350 ರೆಮಿಡಿಸಿವಿರ್ ಮಾತ್ರ ಪೂರೈಕೆಯಾಗುತ್ತಿದೆ. ನಾನು ಸಿಎಂ ಜೊತೆ ಮಾತನಾಡಿ ಕೊರತೆ ಬಗ್ಗೆ ಹೇಳಿದ್ದೇನೆ.
ಮುಖ್ಯಮಂತ್ರಿಗಳು ಅಗತ್ಯವಿರುವಷ್ಟು ರೆಮಿಡಿಸಿವಿರ್ ಪೂರೈಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇನ್ನು ಜಿಲ್ಲಾಸ್ಪತ್ರೆ ಆವರಣದಲ್ಲಿ 6 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಿದ್ದೇವೆ. ನಮ್ಮಲ್ಲಿ 200 ಬೆಡ್ ಗಳ ಕೋವಿಡ್ ಆಸ್ಪತ್ರೆ ಸಜ್ಜಾಗುತ್ತಿದೆ. ಅದಕ್ಕೆ ಬೇಕಾಗುವ ಆಕ್ಸಿಜನ್, ಮೆಡಿಸಿನ್ ಒದಗಿಸುತ್ತೇವೆ.
ಜಿಲ್ಲೆಯಲ್ಲಿ ಆಕ್ಸಿಜನ್ ವೆಂಟಿಲೇಟರ್ ಆಪರೇಟರ್ ಕೊರತೆಯಿದೆ. ಎಲ್ಲಾ ತಾಲೂಕುಗಳಿಗೆ ನೀಡಿರುವ ವೆಂಟಿಲೇಟರ್ ವಾಪಸ್ ಪಡೆಯಲಾಗುತ್ತದೆ.
ಎಲ್ಲಾ 78 ವೆಂಟಿಲೇಟರ್ ಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸುತ್ತೇವೆ. ಕೋವಿಡ್ ಮೂರನೇ ಅಲೆ ಆರಂಭಕ್ಕೂ ಮುನ್ನವೇ ಎಚ್ಚರವಹಿಸುತ್ತೇವೆ.
ಆದಷ್ಟು ಬೇಗ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಆರಂಭಿಸುತ್ತೇವೆ. ಜಿಲ್ಲೆಗೆ 499 ಜಂಬೋ ಸಿಲಿಂಡರ್ ಅವಶ್ಯಕತೆ ಇದೆ. ಎರಡು ದಿನಗಳೊಳಗೆ ಸಮಸ್ಯೆ ಇತ್ಯರ್ಥಪಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ರಾಮುಲು ಹೇಳಿದ್ದಾರೆ.