ಸೋತವರು ದೆಹಲಿಗೆ ಹೋಗಿ ಲಾಬಿ ಮಾಡಿದ್ರೆ ಸಿಎಂ ಬದಲಾಗಲ್ಲ : ರೇಣುಕಾಚಾರ್ಯ
ಬೆಂಗಳೂರು : ಯಾರೋ ಒಬ್ಬರು ಸೋತವರು ದೆಹಲಿಗೆ ಹೋಗಿ ಲಾಬಿ ಮಾಡಿದ ತಕ್ಷಣ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಂಕಷ್ಟದ ಮಧ್ಯೆ ಸಿಎಂ ಬದಲಾವಣೆಯ ಮಾತುಗಳು ಕೂಡ ಕೇಳಿಬರುತ್ತಿದ್ದು, ಈ ಬಗ್ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಮಾಡುವುದು ಅಪಪ್ರಚಾರ, ಹಸಿ ಸುಳ್ಳು ಮತ್ತು ಊಹಾಪೋಹ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಪ್ರಶ್ನಾತೀತ ನಾಯಕ. 2023ರ ಚುನಾವಣೆಗೂ ಅವರ ಮಾರ್ಗದರ್ಶನದಲ್ಲೇ ಸಂಘಟನೆ ಮಾಡುತ್ತೇವೆ.
ಯಾರೋ ಒಬ್ಬರು ಸೋತವರು ದೆಹಲಿಗೆ ಹೋಗಿ ಲಾಬಿ ಮಾಡಿದ ತಕ್ಷಣ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡಲ್ಲ. ಅವರನ್ನು ಮಂತ್ರಿ ಮಾಡಿದ್ದಕ್ಕೆ ಇದೇ ಕೊಡುಗೆ.
ಅವರ ಕ್ಷೇತ್ರಕ್ಕೂ ಇಲ್ಲ ಜನಪರ ಕೆಲಸ ಮಾಡಲ್ಲ. ಕೋವಿಡ್ ಬಂದಾಗ ಒಬ್ಬ ಮಂತ್ರಿಯಾಗಿ ಜನರ ಪರ ಕೆಲಸ ಮಾಡುವುದು ಬಿಟ್ಟು ದೆಹಲಿಯಲ್ಲಿ ಲಾಬಿ ಮಾಡುತ್ತಿಯಲ್ಲೊ ಪುಣ್ಯಾತ್ಮ.
ಜನರು ಸಾವು ಬದುಕಿನ ನಡುವೆ ಹೋರಾಡುವಾಗ ನಾವು ರಾಜಕಾರಣ ಮಾಡಬಾರದು. ಈಗಾಗಲೇ ನಮ್ಮ ರಾಷ್ಟ್ರೀಯ ನಾಯಕರು ಮತ್ತು ರಾಜ್ಯಾಧ್ಯಕ್ಷರು ಅನೇಕಬಾರಿ ಸ್ಪಷ್ಟಪಡಿಸಿದ್ದಾರೆ.
ಈ ಅವಧಿ ಸಂಪೂರ್ಣವಾಗಿ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.