ಸಚಿವರ ದುರಹಂಕಾರ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ : ರೇಣುಕಾಚಾರ್ಯ
ದಾವಣಗೆರೆ : ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲು ಪಕ್ಷದ ಎಲ್ಲಾ ಕಾರ್ಯಕರ್ತರ ಶ್ರಮವಿದೆ. ಆದ್ರೆ ಸರ್ಕಾರದಲ್ಲಿ ಇದೀಗ ಕೆಲ ಸಚಿವರು ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಅದನ್ನ ನನ್ನ ಸಹಿಸಿಕೊಳ್ಳಲು ಆಗುತ್ತಿಲ್ಲ ಅಂತಾ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಂದಿನಂತೆ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯ ಆಡಳಿತ ಮಾಡ್ತಿದ್ದಾರೆ. ಆದ್ರೆ ಕೆಲವು ಸಚಿವರು ವರ್ತನೆ ಸರಿಯಿಲ್ಲ. ಸಂಪುಟದಲ್ಲಿರುವ ಕೆಲ ಸಚಿವರು ದುರಹಂಕಾರದಿಂದ ಸರ್ವಾಧಿಕಾರಿಗಳಂತೆ ವರ್ತಿಸುತಿದ್ದಾರೆ. ಅವರಿಗೆ ಬೇರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅವರು ವಿಧಾನಸೌಧದ ಮೂರನೇ ಕೊಠಡಿ ಮತ್ತು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ ಅಂತಾ ಕಿಡಿಕಾರಿದ್ರು.
ಇನ್ನು ಕೆಲವು ಸಚಿವರ ದುರಹಂಕಾರ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಚಿವರು ದುರಹಂಕಾರದ ವರ್ತನೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಮಾತನಾಡ್ತೇನೆ. ಬಿಜೆಪಿ ಒಳ್ಳೆಯ ಆಡಳಿತ ನೀಡಲಿ ಎನ್ನವುದು ಜನರ ಬಯಕೆ ಆಗಿದೆ. ಅದರಂತೆ ರಾಜ್ಯದಲ್ಲಿ ಸಿಎಂ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಆದರೆ ಕ್ಯಾಬಿನೆಟ್ ನಲ್ಲಿ ಕೆಲವು ಸಚಿವರಿಂದ ಸರ್ಕಾರಕ್ಕೆ ಕೇಡು ಬರುತ್ತಿದೆ. ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಒಬ್ಬಿಬ್ಬರ ಪಾತ್ರ ಅಲ್ಲ, ಪ್ರತಿಯೊಬ್ಬರ ಶ್ರಮ ಇದೆ. ಯಡಿಯೂರಪ್ಪ, ಮೋದಿ ಅವರ ವರ್ಚಸ್ಸು ಮತ್ತು ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ವಲಸೆ ಬಿಜೆಪಿಗರಿಗೆ ಟಾಂಗ್ ನೀಡಿದರು.