ನನ್ನ ನಿಸ್ವಾರ್ಥ ಸೇವೆ ಸಹಿಸಲಾಗದೇ ಕಾಂಗ್ರೆಸ್ ನಿಂದ ವಿಕೃತಿ : ರೇಣುಕಾಚಾರ್ಯ
ದಾವಣಗೆರೆ : ಕೋವಿಡ್ ಸೋಂಕಿತ ಶವ ಸಂಸ್ಕಾರ ಮಾಡಿದ್ದಕ್ಕೆ ಟೀಕೆ ವ್ಯಕ್ತ ಪಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ವಿಕೃತಿ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಹೊನ್ನಾಳಿಯ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಹೋಮ ನಡೆಸಿದ್ದಕ್ಕೆ ಟೀಕೆ ವ್ಯಕ್ತವಾದ ಹಿನ್ನೆಲೆ, ಸರಣಿ ಟ್ವೀಟ್ ಗಳನ್ನು ಮಾಡಿರುವ ರೇಣುಕಾಚಾರ್ಯ, ನಾನೊಬ್ಬ ಜನಸೇವಕನಾಗಿ ನಮ್ಮ ಕ್ಷೇತ್ರದಲ್ಲಿ ನಮ್ಮ ಬಂಧುಗಳ ರಕ್ಷಣೆಗಾಗಿ ನಾನು ಸಲ್ಲಿಸುತ್ತಿರುವ ನಿರಂತರ ನಿಸ್ವಾರ್ಥ ಸೇವೆಯನ್ನು ಈ ರೀತಿ ಬಣ್ಣಿಸುತ್ತಿದ್ದಾರೆ. ನಾಟಕ, ದೊಂಬರಾಟ, ಕಾಮಿಡಿ ಪೀಸ್, ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಅಪ ಪ್ರಚಾರ ಮಾಡಿದ್ದಾರೆ.
ಕೋವಿಡ್ ಸೋಂಕಿತ ಶವ ಸಂಸ್ಕಾರ ಮಾಡಿದ್ದಕ್ಕೆ ಟೀಕೆ ವ್ಯಕ್ತ ಪಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ವಿಕೃತಿ. ಪ್ರತಿದಿನ ಕೋವಿಡ್ ವಾರ್ಡ್ ನ ಪ್ರತಿ ಬೆಡ್ ಗೆ ಭೇಟಿ ನೀಡಿ ನನ್ನ ಬಂಧುಗಳಿಗೆ ಆತ್ಮಸ್ಥೈರ್ಯ ತುಂಬಿದ್ದಕ್ಕೆ ಟೀಕೆ, ಜನರ ಆರೋಗ್ಯ ವೃದ್ಧಿಗಾಗಿ ಹೋಮ ಮಾಡಿಸಿದ್ದಕ್ಕೆ ಹಾಗೂ ಹೋಳಿಗೆ ಊಟದ ಬಗ್ಗೆ ಟೀಕೆ, ಪ್ರತಿದಿನ ನಾನು ವೈಯಕ್ತಿಕವಾಗಿ ನೀಡುತ್ತಿರುವ ಉಪಹಾರದ ಬಗ್ಗೆ ಟೀಕೆ, ಕೋವಿಡ್ ಸೋಂಕಿತರಿಗೆ ಯೋಗಾ ಹಾಗೂ ಮನರಂಜನೆ ಬಗ್ಗೆ ಟೀಕೆ ಮಾಡಿದ್ದಾರೆ.
ಸಿಸಿಸಿ ವಾಸ್ತವ್ಯದ ಬಗ್ಗೆ ಹಗುರ ಮಾತುಗಳು ಕೇಳಿಬಂದಿರುವುದು ನನ್ನ ಗಮನಕ್ಕೆ ಬಂದಿದೆ. ಇದರಿಂದ ವೈಯಕ್ತಿಕ ತೇಜೋವಧೆ ಆಗುತ್ತಿದೆ. ಹೀಗೆ ನನ್ನ ಬಗ್ಗೆ ಕ್ಷೇತ್ರದ ಮಾಜಿ ಶಾಸಕರು ಹಾಗೂ ಅವರ ಪಕ್ಷದ ಮುಖಂಡರು ಕೀಳು ಮಟ್ಟದಲ್ಲಿ ಟೀಕಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದು ನಿಮ್ಮ ಕೀಳು ಮಟ್ಟದ ರಾಜಕೀಯ ಮನಸ್ಥಿತಿಯನ್ನು ತೋರಿಸುತ್ತದೆ. ಇದು ರಾಜಕೀಯ ಮಾಡುವ ಸಮಯವಲ್ಲ ಮಾನವೀಯತೆ ಮೆರೆಯುವ ಸಮಯ ಎಂದು ಬರೆದುಕೊಂಡಿದ್ದಾರೆ.