ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನ ಗವರ್ನರ್ ರಾಜೀನಾಮೆ
ಶ್ರೀಲಂಕಾ : ದೇಶದಲ್ಲಿ ಆರ್ಥಕತೆಯು ಸಂಪೂರ್ಣವಾಗಿ ಕುಸಿದಿದ್ದು, ದೇಶದಲ್ಲಿ ಅಲ್ಲೋಲ ಕೊಲ್ಲೋಲ ಸೃಷ್ಟಿಯಾಗಿದೆ. ಇದರಿಂದ ದಿನನಿತ್ಯ ಬಳಕೆಯ ವಸ್ತುಗಳು ಗಗನಕ್ಕೇರಿವೆ. ಈ ನಡುವೆ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನ ಗವರ್ನರ್ ಅಜಿತ್ ನಿವಾರ್ಡ್ ಕ್ಯಾಬ್ರಾಲ್ ಅವರು ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದ ಅವರು, ‘ಎಲ್ಲ ಸಚಿವ ಸಂಪುಟದ ಸದಸ್ಯರು ರಾಜೀನಾಮೆ ನೀಡಿದ ಹಿನ್ನೆಲೆ, ಇಂದು ನಾನು ಕೂಡ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಗೊಟಾಬಯ ರಾಜಪಕ್ಸ ಅವರಿಗೆ ನೀಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆ (ಬಾನುವಾರ) ರಾತ್ರಿ ದೇಶದ 26 ಸಂಪುಟ ಸಚಿವರು ನಿನ್ನೆ ತಡರಾತ್ರಿ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ದೇಶದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವವರಿಲ್ಲದೆ ಮತ್ತಷ್ಟು ಅರಾಜಕತೆ ಸೃಷ್ಟಿಯಾಗುವ ಆತಂಕ ಏರ್ಪಟ್ಟಿದೆ
ಕ್ಯಾಬ್ರಾಲ್ ಅವರು ಶ್ರೀಲಂಕಾವು ವಿಶ್ವ ಹಣಕಾಸು ನಿಧಿಯಿಂದ ಭಾರೀ ಮೊತ್ತದ ಹಣ ಸಾಲವಾಗಿ ಪಡೆಯುವುದಕ್ಕೆ ವಿರೋಧಿಸಿದ್ದರು. ಈ ನಡುವೆ ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರತಿಭಟನೆಗಳು ಉಲ್ಬಣಗೊಳ್ಳುತ್ತಿದ್ದಂತೆ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.