ನವದೆಹಲಿ : ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ರಾಷ್ಟ್ರೀಯ ಜನತಾದಳ (Rashtriya Janata Dal) ಟ್ವೀಟ್ ಮಾಡಿದ್ದು, ಆ ಪಕ್ಷದ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಬಿಜೆಪಿ (BJP) ಮುಂದಾಗಿದೆ.
ನೂತನ ಸಂಸತ್ ನ್ನು ಶವಪೆಟ್ಟಿಗೆಯ ಆಕಾರಕ್ಕೆ ಹೋಲಿಸಿದ ಟ್ವೀಟ್ ಗೆ ಬಿಜೆಪಿ, ಆರ್ ಜೆಡಿ (RJD) ವಿರುದ್ಧ ವಾಗ್ದಾಳಿ ನಡೆಸಿದೆ. ಟ್ವಿಟರ್ ಪೋಸ್ಟ್ನ ಹಿಂದೆ ಇರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿಕೊಂಡಿದೆ. ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ, ಸಂಸತ್ತಿನ ಕಟ್ಟಡವನ್ನು ಸಾರ್ವಜನಿಕ ಹಣದಿಂದ ನಿರ್ಮಿಸಲಾಗಿದೆ. ಅದನ್ನು ಶವ ಪೆಟ್ಟಿಗೆಗೆ ಹೋಲಿಸಿರುವುದು ದುರದೃಷ್ಟಕರ ಸಂಗತಿ.
ಸಂಸತ್ ಉದ್ಘಾಟನೆ ಬಹಿಷ್ಕರಿಸಿರುವವರು ಸಂಸತ್ತಿನ ಕಲಾಪಕ್ಕೆ ಹಾಜರಾಗುತ್ತಾರೆ. ಇವರು ಶಾಶ್ವತವಾಗಿ ಸಂಸತ್ತನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರಾ? ಅವರ ಲೋಕಸಭೆ ಮತ್ತು ರಾಜ್ಯಸಭೆಯ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಆರ್ ಜೆಡಿಯನ್ನು ದೇಶದ ಜನರು 2024 ರಲ್ಲಿ ಅದೇ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ. ಜನರು ಪ್ರಜಾಪ್ರಭುತ್ವದ ಹೊಸ ಮಂದಿರವನ್ನು ಪ್ರವೇಶಿಸಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿದ್ದಾರೆ.