ಎಚ್ಚರ…ಆರ್ ಸಿಬಿ…ಎಚ್ಚರ- ಕನ್ನಡ ಬಾವುಟ ಬಣ್ಣದ ಬೂಟು ಧರಿಸಿದ್ರೆ ಹುಷಾರು…
ಆರ್ ಸಿಬಿಯಿಂದ ಕನ್ನಡ ಬಾವುಟಕ್ಕೆ ಅವಮಾನ
ಕನ್ನಡ ಬಾವುಟ ಬಣ್ಣದ ಶ್ಯೂ ಧರಿಸಲಿರುವ ಆರ್ ಸಿಬಿ ಆಟಗಾರರು..
ಕನ್ನಡಾಂಬೆಯ ಎದೆಯ ಮೇಲೆ ಕಾಲಿಡ್ತಾರಾ ಆರ್ ಸಿಬಿ ಆಟಗಾರರು…?
ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಇದು ನಮ್ಮ ಬೆಂಗಳೂರಿನ ಹೆಮ್ಮೆ.. ಕರುನಾಡಿನ ಹಿರಿಮೆ..
ಹೌದು, ಐಪಿಎಲ್ ನಲ್ಲಿ ಆರ್ ಸಿಬಿ ಅಂದ್ರೆ ಆರ್ ಸಿಬಿಯೇ.. ಪಂದ್ಯ ಗೆಲ್ಲಲಿ, ಸೋಲಲಿ.. ಪ್ರಶಸ್ತಿ ಗೆಲ್ಲದಿದ್ರೂ ಪ್ರತಿ ವರ್ಷವೂ ಈ ಬಾರಿ ಕಪ್ ನಮ್ದೆ ಅಂತ ಬೀಗುತ್ತಿರುವ ಅಭಿಮಾನಿಗಳ ಸಂಖ್ಯೆಗೇನೂ ಕಮ್ಮಿ ಇಲ್ಲ.
ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ ಸಿಬಿ ತಂಡದ ಬಗ್ಗೆ ಅಭಿಮಾನಿಗಳು ಇಟ್ಟಿರುವ ಪ್ರೀತಿ ಅಷ್ಟಿಷ್ಟಲ್ಲ. ತಂಡದಲ್ಲಿ ಹೆಚ್ಚು ಕನ್ನಡಿಗರೂ ಇಲ್ಲದಿದ್ರೂ ಪರವಾಗಿಲ್ಲ. ಆರ್ ಸಿಬಿ ನಮ್ಮ ಗರಿಮೆ ಅನ್ನೋ ಮನೋಭಾವನೆಯನ್ನು ಹೊಂದಿದ್ದಾರೆ.
ಆದ್ರೆ ಆರ್ ಸಿಬಿ ಈ ಬಾರಿ ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ನೀಡುವ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ನ ಆ ಒಂದು ನಿರ್ಧಾರ ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಆರ್ ಸಿಬಿಯಲ್ಲಿ ಕನ್ನಡಿಗ ಆಟಗಾರರು ಇಲ್ಲದಿದ್ದಾಗಲೂ ಯಾರು ಕೂಡ ಬೇಸರಗೊಂಡಿಲ್ಲ. ಬೇಸರಗೊಂಡಿದ್ರೂ ಅದನ್ನು ವ್ಯಕ್ತಪಡಿಸಿಲ್ಲ. ಆದ್ರೆ ಈ ಒಂದು ನಿರ್ಧಾರದ ವಿರುದ್ಧ ಪ್ರತಿಯೊಬ್ಬ ಕನ್ನಡಿಗರು ಎಚ್ಚೆತ್ತುಕೊಳ್ಳಲೇಬೇಕು. ಆರ್ ಸಿಬಿ ಮ್ಯಾನೇಜ್ ಮೆಂಟ್ ಕೂಡ ತನ್ನ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು. ಇಲ್ಲದಿದ್ರೆ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ವಿರುದ್ಧ ಪ್ರತಿಭಟನೆ ನಡೆದ್ರೂ ಅಚ್ಚರಿ ಏನಿಲ್ಲ.
ಹಾಗಿದ್ರೆ ಆರ್ ಸಿಬಿ ಮ್ಯಾನೇಜ್ ಮೆಂಟ್ ಮಾಡಿರುವ ಎಡವಟ್ಟು ಏನು ? ಹಾಗಂತ ಅದೇನೂ ಸಣ್ಣ ಎಡವಟ್ಟಲ್ಲ. ಮಹಾ ಅಪರಾಧ. ಕನ್ನಡಾಂಬೆಗೆ ಮಾಡಿರುವ ಅವಮಾನವಾಗಿದೆ. ಕನ್ನಡಾಂಬೆಯ ಎದೆಯ ಮೇಲೆ ಕಾಲಿಡುವ ತೀರ್ಮಾನ ತೆಗೆದುಕೊಂಡಿರುವುದನ್ನು ಸಹಿಸಲು ಸಾಧ್ಯವಿಲ್ಲ.
ಅಷ್ಟಕ್ಕೂ ಆಗಿರುವುದು ಏನು ? ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರರು ಕೆಂಪು ಮತ್ತು ಹಳದಿ ಬಣ್ಣದ ಶೂ ಧರಿಸಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮಾಹಿತಿಯನ್ನು ನೀಡಿದ್ದಾರೆ. ಕೆಂಪು ಮತ್ತು ಹಳದಿ ಬಣ್ಣದ ಶ್ಯೂಗಳನ್ನು ಈ ಬಾರಿಯ ಐಪಿಎಲ್ ನಲ್ಲಿ ಧರಿಸುವುದಾಗಿ ವಿರಾಟ್ ಕೊಹ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ.
ಕೆಂಪು ಮತ್ತು ಹಳದಿ ಬಣ್ಣ ನಮ್ಮ ಕನ್ನಡ ಬಾವುಟದ ಬಣ್ಣವಾಗಿದೆ. ಕನ್ನಡ ಬಾವುಟದ ಬಣ್ಣ ನಮ್ಮ ಸ್ವಾಭಿಮಾನ ಮತ್ತು ಗೌರವದ ಪ್ರತೀಕವಾಗಿದೆ. ತ್ರಿವರ್ಣ ಧ್ವಜದಷ್ಟೇ ಕನ್ನಡ ಬಾವುಟ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದು ನಮ್ಮ ಹೆಮ್ಮೆಯ ಪ್ರತೀಕವಾಗಿದೆ. ಅದ್ರಲ್ಲಿ ನಮ್ಮ ಭಾಷೆ, ಸಂಸ್ಕøತಿಯೂ ಇದೆ. ಇಂತಹ ಬಾವುಟದ ಬಣ್ಣದ ಶ್ಯೂಗಳನ್ನು ಆರ್ ಸಿಬಿ ಆಟಗಾರರು ಧರಿಸುವುದು ಅಂದ್ರೆ ಅದು ಅವಮಾನವಾಗಲ್ವಾ ?
ಖಂಡಿತ ಅವಮಾನವೇ.. ಆರ್ ಸಿಬಿಯ ಉದ್ದೇಶ ಏನೇ ಇರಲಿ, ಆದ್ರೆ ಕನ್ನಡದ ಬಾವುಟದ ಬಣ್ಣದ ಶ್ಯೂಗಳನ್ನು ಧರಿಸುವುದು ಸಮಂಜಸವಲ್ಲ.
ಹಾಗೇ ನೋಡಿದ್ರೆ ವಿಜಯ ಮಲ್ಯ ಕೈಯಿಂದ ಆರ್ ಸಿಬಿ ಕೈ ತಪ್ಪಿ ಹೋದ ನಂತರ ಕನ್ನಡಿಗರದ್ದು ಅನ್ನೋದು ಏನು ಇಲ್ಲ. ಮಲ್ಯ ಒಡೆತನದಲ್ಲಿದ್ದಾಗ ಕನಿಷ್ಠ ತಂಡದಲ್ಲಿ ಮತ್ತು ಟೀಮ್ ಮ್ಯಾನೇಜ್ ಮೆಂಟ್ ನಲ್ಲಿ ಕನ್ನಡಿಗರ ಹೆಸರುಗಳಿದ್ದವು. ಆದ್ರೆ ಈಗ ಎಲ್ಲವೂ ವಿದೇಶಿ ಹಾಗೂ ಹೊರ ರಾಜ್ಯಗಳ ಹೆಸರುಗಳು ಜಾಸ್ತಿ ಇವೆ. ಅದನ್ನು ಬೇಕಾದ್ರೂ ಒಪ್ಪಿಕೊಳ್ಳೋಣ. ಫ್ರಾಂಚೈಸಿ ಮಾಲೀಕರು ದುಡ್ಡು ಹಾಕಿದ್ದಾರೆ. ಅದು ಅವರ ತೀರ್ಮಾನ ಅಂತ. ಆದ್ರೆ ಕನ್ನಡ ಬಾವುಟದ ಶ್ಯೂ ಧರಿಸಿಕೊಂಡು ಆಡುವುದನ್ನು ಮಾತ್ರ ಸಹಿಸಲು ಸಾಧ್ಯವಿಲ್ಲ.
ಅದು ಅಲ್ಲದೆ ಆರ್ ಸಿಬಿ ತಂಡದ ಜೆರ್ಸಿಯಲ್ಲಿ ಕನ್ನಡ ಬಾವುಟದ ಬಣ್ಣ ಯಾಕಿಲ್ಲ ? ಕೆಂಪು ಬಣ್ಣವಿದ್ರೂ ಎಲ್ಲೂ ಕೂಡ ಹಳದಿ ಬಣ್ಣ ಕಾಣ ಸಿಗುವುದಿಲ್ಲ. ಹಾಗಿದ್ದ ಮೇಲೆ ಕನ್ನಡಿಗರು ಕಸದಿಂದ ಕಡೆ ಅಂತ ಆರ್ ಸಿಬಿ ಮ್ಯಾನೇಜ್ ಮೆಂಟ್ ಅಂದುಕೊಂಡಿದೆಯಾ ?
ಏನೇ ಇರಲಿ, ಇದು ಎಚ್ಚರಿಕೆ,, ಇದು ಕಳಕಳಿಯಲ್ಲ.. ಮನವಿಯೂ ಅಲ್ಲ. ಆರ್ ಸಿಬಿ ಮ್ಯಾನೇಜ್ ಮೆಂಟ್ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು. ಇಲ್ಲದಿದ್ರೆ ಆರ್ ಸಿಬಿ ತನ್ನತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕೆ ತಕ್ಕ ಬೆಲೆ ನೀಡಬೇಕಾಗುತ್ತದೆ.