ಕನ್ನಡಿಗ ರಾಹುಲ್ ರನ್ನ ಟಾರ್ಗೆಟ್ ಮಾಡ್ತಿದ್ದಾರಾ ಈ ಕ್ರಿಕೆಟರ್ಸ್
ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಎಂಬಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಸೋತ ಬಳಿಕವೂ ಅದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.
ಮುಖ್ಯವಾಗಿ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಗುರಿಯಾಗಿಸಿಕೊ0ಡು ಕೆಲ ಮಾಜಿ ಕ್ರಿಕೆಟಿಗರು ಟೀಕೆಗಳನ್ನು ಮಾಡಲು ಶುರು ಮಾಡಿದ್ದಾರೆ.
ಕೆ.ಎಲ್. ರಾಹುಲ್ ನಾಯಕತ್ವಕ್ಕೆ ಸೂಕ್ತವಲ್ಲ. ಅವರ ನಾಯಕತ್ವದಿಂದಲೇ ಟೀಂ ಇಂಡಿಯಾ ಸೋತಿದೆ ಎನ್ನುತ್ತಾ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕ್ರಿಕೆಟಿಗರು ಟೀಕೆಗಳನ್ನು ಮಾಡುತ್ತಿದ್ದಾರೆ.
ಬೆನ್ನುನೋವಿನಿಂದಾಗಿ ವಿರಾಟ್ ಕೊಹ್ಲಿ ಕೊನೆಯ ನಿಮಿಷದಲ್ಲಿ ಎರಡನೇ ಪಂದ್ಯದಿಂದ ದೂರ ಉಳಿದರು.
ಇದರಿಂದ ಉಪನಾಯಕರಾಗಿದ್ದ ಕೆ.ಎಲ್. ರಾಹುಲ್ ಎದ್ನೋ ಬಿದ್ನೋ ಎಂಬಂತೆ ಟಾಸ್ ಗೆ ಬಂದು ನಿಂತುಕೊಂಡರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳಿಂದ ಸೋಲನುಭವಿಸಿತು.
ಇದರೊಂದಿಗೆ ಕೇಪ್ ಟೌನ್ ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದಕ್ಕಾಗಿ ಟೀಂ ಇಂಡಿಯಾ ಕಸರತ್ತು ಆರಂಭಿಸಿದೆ.
ಈ ಮಧ್ಯೆ ಎರಡನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಕೆ.ಎಲ್.ರಾಹುಲ್ ನಾಯಕತ್ವದ ಬಗ್ಗೆ ಕೆಲ ಕ್ರಿಕೆಟಿಗರು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡದ ಸೋಲಿಗೆ ರಾಹುಲ್ ನಾಯಕತ್ವ ವೈಫಲ್ಯವೇ ಕಾರಣ.
ಅವರ ಕೆಟ್ಟ ನಿರ್ಧಾರಗಳಿಂದ ಟೀಂ ಇಂಡಿಯಾ ಸೋತಿದೆ ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್ನಲ್ಲಿ, ಫೀಲ್ಡ್ ಸೆಟಪ್ ಕೆಟ್ಟದಾಗಿತ್ತು. ರಾಹುಲ್ ರ ಅನಾನುಭವವೇ ಭಾರತಕ್ಕೆ ಸೋಲಾಯಿತು ಎಂದು ಗವಾಸ್ಕರ್ ಟೀಕಿಸಿದ್ದಾರೆ.
ಇತ್ತ ಟೀಂ ಇಂಡಿಯಾ ಮಾಜಿ ಆಟಗಾರ ವಾಸೀಂ ಜಾಫರ್ ಕೂಡ ರಾಹುಲ್ ನಾಯಕತ್ವವನ್ನು ಟೀಕಿಸಿದ್ದಾರೆ.
ವಿರಾಟ್ ರಲ್ಲಿದ್ದ ಗುಣಗಳು ರಾಹುಲ್ ಅವರಲ್ಲಿಲ್ಲ. ರಹಾನೆ ಲಭ್ಯವಿದ್ದಾಗ ರಾಹುಲ್ ಗೆ ನಾಯಕತ್ವ ನೀಡಿದ್ದು, ನನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಈ ಮಾಜಿ ಆಟಗಾರರ ಅಭಿಪ್ರಾಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.