ರಾಜಕೀಯದ ಕನ್ನಡಕ ಹಾಕಿ ಆರ್ಎಸ್ಎಸ್ ಅನ್ನು ನೋಡಬೇಡಿ : ಸಿ.ಟಿ.ರವಿ
ಬೆಂಗಳೂರು : ರಾಜಕೀಯದ ಕನ್ನಡಕ ಹಾಕಿ ಆರ್ಎಸ್ಎಸ್ ಅನ್ನು ನೋಡಬೇಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಆರ್ ಎಸ್ ಎಸ್ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗಳ ಬಗ್ಗೆ ಸರಣಿ ಟ್ವೀಟ್ ಗಳ ಮೂಲಕ ಸಿ.ಟಿ.ರವಿ ತಿರುಗೇಟು ಕೊಟ್ಟಿದ್ದಾರೆ.
ಸಿ.ಟಿ.ರವಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ..
ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಎಂದೇ ಆರ್ಎಸ್ಎಸ್ ವಿಶ್ವ ಖ್ಯಾತಿಯಾಗಿದೆ. ಮನೆ-ಮಠ, ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇಲ್ಲಿದೆ.
ಸಮಾಜದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ಸಂಘವೇ ಎಂದರೆ ಆರ್ಎಸ್ಎಸ್.
“ಸರ್ವೇಭವಂತುಸುಖಿನಃ” ಎಂಬ ಶ್ಲೋಕದಂತೆ ಪ್ರತಿಯೊಬ್ಬ ಭಾರತೀಯ ಸುಖೀ ಜೀವನ ಅನುಭವಿಸಲಿ ಎಂಬ ಧ್ಯೇಯ ಸಂಘದ ಸಿದ್ದಾಂತ. ಕಳೆದ 96 ವರ್ಷಗಳಿಂದ ಸಂಘದ ಶಾಖೆಗಳಲ್ಲಿ ಕೇವಲ ದೇಶಭಕ್ತಿಯ ಸಂಸ್ಕಾರ ಕೊಡುವ ಕೆಲಸವಾಗುತ್ತಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ, ಸಮಾಜ ಸುಧಾರಣೆ, ರಾಜಕೀಯ ಸೇರಿಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಆರ್ಎಸ್ಎಸ್ನಲ್ಲಿ ವ್ಯಕ್ತಿ ನಿರ್ಮಾಣದ ಜೊತೆ ರಾಷ್ಟ್ರ ನಿರ್ಮಾಣದ ಧ್ಯೇಯ ಇರುವ ಕಾರಣ ಇಂದು ನಮ್ಮ ಪ್ರಧಾನಿಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಘದ ಸ್ವಯಂ ಸೇವಕರು. ಉನ್ಮತ ಮಟ್ಟದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಶೂನ್ಯಮಟ್ಟಕ್ಕೆ ತಂದಿದ್ದಾರೆ. ಇದು ಯಾವುದರ ಪರಿಣಾಮ ಸನ್ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಅವರೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಲಾತೂರ್ ಭೂಕಂಪ ಸಂದರ್ಭ, ಗುಜರಾತಿನ ಭೂಕಂಪದ ವೇಳೆ, ಒರಿಸ್ಸಾ ಚಂಡಮಾರುತದ ಸಂದರ್ಭ, ಸುನಾಮಿ ಅಪ್ಪಳಿಸಿದಾಗ, ಉತ್ತರಾಖಂಡದಲ್ಲಿ ಜಲ ಪ್ರಳಯವಾದಾಗ, ತಮಿಳುನಾಡಿನ ಪ್ರವಾಹವಾದಾಗ, ಕೊಡಗಿನಲ್ಲಿ ಭೂಕುಸಿತವಾದಾಗ ಆರ್ಎಸ್ಎಸ್ ಸೇವಕರು ನಿಸ್ವಾರ್ಥ ಸೇವೆ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಾರ್ಯಕರ್ತರು ಎಂದೂ ಪ್ರಚಾರ ಬಯಸಿದವರಲ್ಲ.
ಅಸ್ಸಾಂನ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ ಕೊಡುವಲ್ಲಿ, ಅವರನ್ನು ನಾಗರೀಕತೆಯ ಕಡೆ ಹೆಜ್ಜೆ ಹಾಕುವಂತೆ ಮಾಡುವಲ್ಲಿ ಹಾಗೂ ಕರ್ನಾಟಕದ ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಮೂಲಕವೇ ನಕ್ಸಲ್ ನೀತಿಗಳನ್ನು ನಿರ್ಮೂಲನೆ ಮಾಡಿದ ಆರ್ಎಸ್ಎಸ್ ಕಾರ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ ಹೆಚ್ಡಿಕೆ ಅವರೇ ಎಂದು ಸಿಟಿ ರವಿ ಕುಟುಕಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಸ್ವಯಂಸೇವಕರು ತಮ್ಮ ಮನೆಯಲ್ಲಿದ್ದ ಅಕ್ಕಿ-ಬೇಳೆ, ಪಡಿತರಗಳನ್ನು ನಿರ್ಗತಿಕರಿಗೆ ಹಂಚುವ ಉದಾರತೆಯನ್ನು ಮೆರೆದರು. ಎಲ್ಲಿಯೂ ತಾವು ಮಾಡಿದ ಕಾರ್ಯವನ್ನು ತೊರಿಸಲಿಲ್ಲ. ದೇಶದಲ್ಲಿ ಯಾವುದೇ ಮೂಲೆಯಲ್ಲಿ ಜನ ಸಂಕಷ್ಟದಲ್ಲಿ ಇದ್ದಾರೆ ಎಂದರೆ ಸಾಕು ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣವಾಗಿಟ್ಟು ರಕ್ಷಿಸುತ್ತಾರೆ.
ಸ್ವದೇಶಿ ವಸ್ತು ಬಳಕೆ ಬಗ್ಗೆ ಜಾಗೃತಿಗಾಗಿ ಜಾಗರಣಾ ಮಂಚ್, ರೈತಪರ ಹೋರಾಟಕ್ಕೆ ಭಾರತೀಯ ಕಿಸಾನ್ ಸಂಘ, ಕಾರ್ಮಿಕರ ಹೋರಾಟಕ್ಕೆ ಭಾರತೀಯ ಮಜ್ದೂರ್ ಸಂಘ, ಕಾಡು ಜನರ ಹಿತದೃಷ್ಟಿಯಿಂದ ವನ್ಯವಾಸಿ ಕಲ್ಯಾಣ ಆಶ್ರಮಗಳಿದ್ದು, ಬಡವರ ನೆರವಿಗೆ ಆರ್ಎಸ್ಎಸ್ ಬದ್ಧವಾಗಿದೆ.
ಕುಮಾರಸ್ವಾಮಿ ಅವರಿಗೆ ಇನ್ನೂ ಸಂಘದ ಬಗ್ಗೆ ಅನುಮಾನಗಳಿದ್ದರೆ ನಿಮ್ಮ ತಂದೆ ದೇವೇಗೌಡರಲ್ಲಿ ಕೇಳಬೇಕು. ನೀವು ವಿರೋಧ ಪಕ್ಷದಲ್ಲಿರುವ ಕಾರಣ ರಾಜಕೀಯದ ಕನ್ನಡಕ ಹಾಕಿ ಆರ್ಎಸ್ಎಸ್ ಅನ್ನು ನೋಡಬೇಡಿ. ಸಂಘ ಯಾರನ್ನೂ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಿದ್ದಾಂತ ಒಪ್ಪಿದರೆ ಆರ್ಎಸ್ಎಸ್ ನಿಮ್ಮನ್ನು ಸ್ವಾಗತಿಸುತ್ತದೆ ಎಂದು ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.