ಇಂಧನ ಬೆಲೆಯನ್ನು 50 ರೂ.ಗೆ ಇಳಿಸಬೇಕಾದ್ರೆ ಬಿಜೆಪಿಯನ್ನು ಸೋಲಿಸಬೇಕು : ಸಂಜಯ್ ರಾವತ್
ಕೆಲದ ಹಲವಾರು ದಿನಗಳಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗ್ತಲೇ ಇದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಎಲ್ಲಾ ಕಡೆಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿತ್ತು. ಆದ್ರೆ ಇತ್ತೀಚೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂ , ಡೀಸೆಲ್ ಮೇಲೆ 10ರೂ. ಕಡಿಮೆ ಮಾಡಿ ಜನರಿಗೆ ಕೊಂಚ ರಿಲೀಫ್ ನೀಡಿದೆ. ಇದ್ರ ಜೊತೆಗೆ ರಾಜ್ಯ ಸರ್ಕಾರವೂ ಕೂಡ ಪೆಟ್ರೋಲ್ ಡೀಸೆಲ್ ದರ ಕಡಿಮೆ ಮಾಡಿ ದೀಪಾವಳಿಗೆ ಜನರಿಗೆ ಸಿಹಿ ಸುದ್ದಿ ನೀಡಿದೆ. ಇದೇ ರೀತಿ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಕಡಿಮೆ ಮಾಡಲಾಗಿದೆ.
ಈ ನಡುವೆ ಇಂಧನ ಬೆಲೆಯನ್ನು ಲೀಟರ್ ಗೆ 50 ರೂಪಾಯಿಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಎಂದು ಶಿವಸೇನಾದ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಕೇಂದ್ರ ಸರ್ಕಾರವು ಇಂಧನದ ಬೆಲೆಯನ್ನು ಲೀಟರ್ಗೆ 5 ರೂ. ಕಡಿಮೆ ಮಾಡಿದೆ. 50ರೂ. ಕಡಿಮೆ ಮಾಡಬೇಕಾದರೆ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು. ಸಾಲ ಮಾಡಿ ಜನರು ದೀಪಾವಳಿಯನ್ನು ಆಚರಿಸುವಂತಾಗಿದೆ. ಹಣದುಬ್ಬರದಿಂದಾಗಿ ಹಬ್ಬದ ವಾತಾವರಣವೂ ಇಲ್ಲ ಎಂದು ಹೇಳಿದ್ದಾರೆ.