ವಿರೋಧಪಕ್ಷವನ್ನು ಎದುರಿಸುವ ಧೈರ್ಯ `ಪುಕ್ಕಲು ಬಿಜೆಪಿ ಸರ್ಕಾರಕ್ಕಿಲ್ಲ’ : ಸಿದ್ದರಾಮಯ್ಯ
ಬೆಂಗಳೂರು : ವಿರೋಧಪಕ್ಷವನ್ನು ಎದುರಿಸುವ ಧೈರ್ಯ ಈ ಪುಕ್ಕಲು ಬಿಜೆಪಿ ಸರ್ಕಾರಕ್ಕಿಲ್ಲ. ಇದಕ್ಕಾಗಿ ಚರ್ಚೆಗೆ ಹೆದರಿ ಓಡಿಹೋಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇಂದು ಅಧಿವೇಶದಲ್ಲಿ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಈ ಬಾರಿಯ ಅಧಿವೇಶನದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಬಾರದು ಎಂದು ನಮ್ಮ ಪಕ್ಷ ತೀರ್ಮಾನಿಸಿತ್ತು. ಸದನದ ಸಂಪೂರ್ಣ ಸಮಯ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿನಿಯೋಗವಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಆಡಳಿತ ಪಕ್ಷಕ್ಕೆ ಚರ್ಚೆಯೇ ಬೇಕಾಗಿಲ್ಲ.
ನಮ್ಮ ಪಕ್ಷದ ಶಾಸಕರು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ, ಅವರ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರದಿಂದ ಸಮರ್ಪಕ ಉತ್ತರವೇ ಬಂದಿಲ್ಲ. ಹೀಗೆ ಆತುರಾತುರದಲ್ಲಿ ಇವತ್ತೇ ಸದನ ಮುಗಿಸಬೇಕು ಎಂದರೆ ನಮಗೆ ಪ್ರತಿಭಟನೆ ಬಿಟ್ಟು ಬೇರೆ ಯಾವ ದಾರಿ ಇದೆ ಎಂದು ಪ್ರಶ್ನಿಸಿದ್ದಾರೆ.
ಸದನವನ್ನು ಇನ್ನೂ ಒಂದು ವಾರ ಮುಂದುವರೆಸಿ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಲ್ಲಿ, ಸಭಾಧ್ಯಕ್ಷರಲ್ಲಿ ಹಲವು ಬಾರಿ ಮನವಿ ಮಾಡಿದ್ದೇನೆ, ಪತ್ರ ಕೂಡ ಬರೆದಿದ್ದೇನೆ. ವಿರೋಧಪಕ್ಷವನ್ನು ಎದುರಿಸುವ ಧೈರ್ಯ ಈ ಪುಕ್ಕಲು ಬಿಜೆಪಿ ಸರ್ಕಾರಕ್ಕಿಲ್ಲ. ಇದಕ್ಕಾಗಿ ಚರ್ಚೆಗೆ ಹೆದರಿ ಓಡಿಹೋಗುತ್ತಿದೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಚರ್ಚೆ ಬೇಕಾಗಿಲ್ಲ. ತಮ್ಮ ಪಕ್ಷದ ಅಜೆಂಡಾಗಳಿಗೆ ಪೂರಕವಾದ ಜನವಿರೋಧಿ ಮಸೂದೆಗಳಿಗೆ ಅನುಮೋದನೆ ಪಡೆದುಕೊಳ್ಳುವುಷ್ಟೇ ಬೇಕಾಗಿದೆ. ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ನಡೆ.
ನಮಗೆ ಉಳಿದಿರುವುದು ಬೀದಿ ಹೋರಾಟ ಅಷ್ಟೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.