ಮೈಸೂರು ಯುದ್ಧ : ಹುಲಿಯಾ ಹಾಗೂ ಸಿಂಹ ಟ್ವಿಟ್ಟರ್ ಸಮರ
ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯ ನಂತರವೂ ಮೈಸೂರಿನಲ್ಲಿ ರಾಜಕಾರಣಿಗಳ ವಾದ ವಿವಾದ ಮುಂದುರೆದಿದೆ. ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಂಸದ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಮಾತಿನ ವಾರ್ ನಡೆಸಿದ್ದಾರೆ.
ಪ್ರತಾಪ್ ಸಿಂಹಗೆ ರಾಜಕೀಯವಾಗಿ ಇನ್ನೂ ಪ್ರಬುದ್ಧತೆ ಬಂದಿಲ್ಲ. ಮೊದಲು ರೋಹಿಣಿ ಸಿಂಧೂರಿ ಪರ ಇದ್ದವರು ಯಾರು.? ಈಗ ಅವರು ತಮ್ಮ ನಿಲುವು ಬದಲಿಸಿದ್ದು ಏಕೆ.? ಸ್ವಾರ್ಥಕ್ಕಾಗಿ ನಿಲುವುಗಳನ್ನು ಬದಲಾವಣೆ ಮಾಡಿಕೊಳ್ಳುವವರು ಅಪ್ರಬುದ್ಧ ರಾಜಕಾರಣಿಗಳು ಎಂದು ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದರು. ಇದಕ್ಕೆ ಟಾಂಗ್ ಕೊಟ್ಟಿರುವ ಪ್ರತಾಪ್ ಸಿಂಹ, ಸರ್, ಮೈಸೂರು ಜನರ ಜೀವ ಕಾಪಾಡುವ ಸ್ವಾರ್ಥದಿಂದ ಮಾತಾಡಿದ್ದೇನೆ ಅಷ್ಟೇ, ಅದು ವೈಯ್ಯಕ್ತಿಕವಲ್ಲ. ಅಂಕಿ-ಅಂಶ ನೋಡಿ..! ಕೊರೊನಾ ಪಾಸಿಟಿವಿಟಿ ರೆಟ್?ನಲ್ಲಿ ಮೈಸೂರು ನಂಬರ್-1 ಆಗಿದೆ. ಟಾಪ್ನಲ್ಲಿ ಇರುವುದು ನಮಗೆ ಶೋಭೆ ತರುತ್ತದೆಯೇ ಹೇಳಿ ಸಾರ್? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಸರ್ ಇತ್ತೀಚೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ವಿಷಯದಲ್ಲಿ ನಿಮ್ಮನ್ನೂ ಹೊಗಳಿದ್ದೆ, ಹಾಗಂತ ಟಿಪ್ಪು ವಿಷಯದಲ್ಲಿ ನಿಮ್ಮನ್ನು ತೆಗಳಿಲ್ವಾ? ನನ್ನ ವಂದನೆ, ಖಂಡನೆ ಮತ್ತು ಮಂಡನೆಗಳು ಸತ್ಯನಿಷ್ಠವೇ ಹೊರತು ನಿಮ್ಮಂತೆ ಅನುಕೂಲಸಿಂಧುವೂ ಅಲ್ಲ, ಸ್ವಾರ್ಥಪರವೂ ಅಲ್ಲ ಎಂದು ಟಾಂಗ್ ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ತೆಲುಗು ಭಾಷೆಯಲ್ಲಿ ನನ್ನನ್ನು ಸಿದ್ದರಾಮಯ್ಯಗಾರು ಎಂದಿದ್ದಾರೆ. ನಾನು ಇದನ್ನು ಸಕಾರಾತ್ಮಕವಾಗಿಯೇ ಸ್ವೀಕಾರ ಮಾಡುತ್ತೇನೆ. ನನಗೆ ಗೌರವ ನೀಡಲು ಈ ರೀತಿ ಸಂಬೋಧಿಸಿದ್ದಾರೆ ಎಂದು ತಿಳಿದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಇದಕ್ಕೆ ರೀಟ್ವೀಟ್ ಮಾಡಿರುವ ಸಿಂಹ, ನೀವು ರಾಜ್ಯದ ಮುಖ್ಯಮಂತ್ರಿ ಗಾದಿಯೇರಿದ ನಮ್ಮ ಮೈಸೂರು ಸುಪುತ್ರ ಸರ್. ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ನಿಮ್ಮನ್ನು ನಾನು ಸದಾ ಗೌರವಿಸುತ್ತೇನೆ. ಆದರೆ ನೀವೇ ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಉಸ್ತುವಾರಿ ಸಚಿವರಿಗೇ ಹಾಸನದಲ್ಲಿ ಆಗಿದ್ದ ಅನುಭವವನ್ನು ಮರೆತು ರಾಜಕೀಯಕ್ಕಾಗಿ ಹೇಳಿಕೆ ನೀಡಬೇಡಿ ಸರ್ ಎಂದು ಕಾಲೆಳೆದಿದ್ದಾರೆ.