‘ಜನಪೀಡಕ ಸರ್ಕಾರ’ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದ ಸಿದ್ದರಾಮಯ್ಯ
ಬೆಂಗಳೂರು : ನಗರದ ಶಿವಾನಂದ ವೃತ್ತ ಸಮೀಪದ ತಮ್ಮ ಸರ್ಕಾರಿ ನಿವಾಸದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವೈಫಲ್ಯದ ‘ಜನಪೀಡಕ ಸರ್ಕಾರ’ ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ನೇತೃತ್ವದ ಸರ್ಕಾರ ದುರಾಡಳಿತ ಮತ್ತು ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ಕೊಟ್ಟಿದ್ದು, ಬಿಟ್ಟರೆ ಶೂನ್ಯ ಸಾಧನೆ ಮಾಡಿದೆ. ಮೊನ್ನೆ ಬಿ.ಎಸ್. ಯಡಿಯೂರಪ್ಪ 2 ವರ್ಷ ಸರ್ಕಾರ ನಡೆಸಿದೆ ಎಂದು ಸಂಭ್ರಮದ ದಿನ ಆಚರಿಸಿ ರಾಜೀನಾಮೆ ನೀಡಿದರು. ರಾಜ್ಯವನ್ನು ಸಂಕಷ್ಟದ ದಿನದಲ್ಲೂ ಅಭಿವೃದ್ಧಿಗೆ ಕೊಂಡೊಯ್ದಿದ್ದೇವೆ ಅಂತೆಲ್ಲಾ ಹೇಳಿದರು. ಇದೀಗ ನಿರ್ಗಮಿಸಿದ್ದಾರೆ. ಹೊಸದಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದರು.
ಇನ್ನು ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಒಂದಿಷ್ಟು ಘೋಷಣೆ ಮಾಡಿದ್ದು, ಅದನ್ನು ಸ್ವಾಗತಿಸುತ್ತೇನೆ. ಆದರೆ ಆದಾಯ ಮೂಲ ಎಲ್ಲಿದೆ. ಎಲ್ಲಿಂದ ಹಣ ತರುತ್ತೀರಿ ಎಂದು ಪ್ರಶ್ನಿಸಿ, ಸಾಲ ಮಾಡಿ ಹೋಳಿಗೆ ತಿನ್ನು ಅನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕೇಂದ್ರದ ವಿರುದ್ಧ ಕಿಡಿಕಾರಿ, 70 ವರ್ಷದಲ್ಲಿ 53 ಲಕ್ಷ ಕೋಟಿ ಮೊತ್ತದ ಸಾಲ ಇತ್ತು. ಜಿಡಿಪಿ ಸಹ ಕುಸಿದಿದೆ. ಇಂಧನ ಬೆಲೆ ಏರಿದೆ. ಅಡುಗೆ ಎಣ್ಣೆ ಬೆಲೆ ಏರಿಕೆ ಎಷ್ಟಾಗಿದೆ ಎಂದರೆ ಈಗ ಪಕೋಡಾ ಸಹ ಮಾಡಲು ಸಾಧ್ಯವಿಲ್ಲ ಎಂದು ಮೋದಿ ಹೇಳಿಕೆಗೆ ಟಾಂಗ್ ನೀಡಿದರು. 12 ಕೋಟಿ ಉದ್ಯೋಗ ನಷ್ಟವಾಗಿದೆ. ಮೋದಿ ಅಮಾನುಷ ವ್ಯಕ್ತಿ. ಕೊರೊನಾ ಔಷಧಿಯ ಮೇಲಿನ ಸಿಎಸ್ ಟಿ ಕೂಡ ತೆಗೆಯಲಿಲ್ಲ ಎಂದು ಟೀಕಿಸಿದರು.
ಇನ್ನು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿಚಾರವಾಗಿ ಯತ್ನಾಳ್, ವಿಶ್ವನಾಥ್ ಇನ್ನೂ ಚೆನ್ನಾಗಿ ಮಾಹಿತಿ ಕೊಡ್ತಾರೆ. ಎಷ್ಟು ಪಸೆರ್ಂಟ್ ಅಂತ ಅವರೇ ಸರಿಯಾಗಿ ಹೇಳ್ತಾರೆ. ಪಕ್ಷದವರೇ ಆರೋಪ ಮಾಡಿದಾಗ ಯಡಿಯೂರಪ್ಪಗೆ ನೋವಾಗಲಿಲ್ಲ. ನಾನು ಹೇಳಿದಾಗ ನೋವಾಗಿದೆ ಎಂದು ಕುಟುಕಿದರು.