ಬಿಎಸ್ ವೈ ರಾಜೀನಾಮೆ ಕೇಳಿದ ಸಿದ್ದುಗೆ ಶೋಭಾ ಕರಂದ್ಲಾಜೆ ಕ್ಲಾಸ್
ಉಡುಪಿ : ಕೇವಲ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವುದು ಪರಿಹಾರ ಅಲ್ಲ. ಸರ್ಕಾರಕ್ಕೆ ಸಲಹೆ ಕೊಡಿ ಅಧಿಕಾರಿಗಳ ಸಭೆ ಕರೆಯಿರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚಾಮರಾಜನಗರ ಘಟನೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ಕೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ವಿರೋಧಪಕ್ಷಕ್ಕೆ ಅಷ್ಟೆ ಇದೆ. ಮುಖ್ಯ ಮಂತ್ರಿಗಳ ರಾಜೀನಾಮೆ ಕೇಳುವುದು ಪರಿಹಾರ ಅಲ್ಲ.
ಸರಕಾರಕ್ಕೆ ಸಲಹೆ ಕೊಡಿ ಅಧಿಕಾರಿಗಳ ಸಭೆ ಕರೆಯಿರಿ. ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಆಳ್ವಿಕೆ ಮಾಡಿದ್ದಾರೆ ಎಂದರು.
ಇನ್ನು 50 ವರ್ಷದ ಕಾಂಗ್ರೆಸ್ ಕೆಟ್ಟ ಆಡಳಿತವನ್ನು ಈಗ ಅನುಭವಿಸುತ್ತಿದ್ದೇವೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಆಸ್ಪತ್ರೆಗಳನ್ನು ಬೆಳೆಸಿಲ್ಲ.
ರಾಜಕೀಯ ಮಾತನಾಡುವುದಿಲ್ಲ ಎಲ್ಲರೂ ಒಟ್ಟು ಸೇರಿ ಕೊರೋನಾ ಎದುರಿಸೋಣ ಎಂದು ಮನವಿ ಮಾಡಿಕೊಂಡರು.