ಯುವನಟನ ವಿಡಿಯೋ ಶೇರ್ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ
ಬೆಂಗಳೂರು : ಕೊರೊನಾ ವಿಚಾರದಲ್ಲಿ ಸರ್ಕಾರದ ಭ್ರಷ್ಟಾಚಾರ, ನಿರ್ಲಕ್ಷ್ಯತೆಯನ್ನ ಪ್ರಸ್ತಾಪಿಸಿರುವ ಕಿರುತೆರೆ ನಟನ ವಿಡಿಯೋ ಶೇರ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ನಿಷ್ಕ್ರಿಯತೆಯಿಂದ ತನ್ನವರನ್ನು ಕಳೆದುಕೊಂಡ ಈ ದುಃಖತಪ್ತ ಯುವನಟನ ಹೃದಯವಿದ್ರಾವಕ ಮಾತುಗಳನ್ನೊಮ್ಮೆ ಕೇಳಿ. ರಾಜ್ಯ ಸರ್ಕಾರ ಸಾಮೂಹಿಕ ಹತ್ಯೆ ನಡೆಸುತ್ತಿದೆ ಎನ್ನುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ನಟ, ಸರ್ಕಾರದ ನಿರ್ಲಕ್ಷ್ಯ ಧೋರಣೆ, ಭ್ರಷ್ಟಾಚಾರವನ್ನು ಪ್ರಸ್ತಾಪ ಮಾಡಿದ್ದಾನೆ. ಅಲ್ಲದೆ ಕೊರೊನಾ ಭೀಕರತೆ ಬಗ್ಗೆ ವಿವರಿಸಿದ್ದಾರೆ. ಈ ಬಾರಿ ಕೊರೊನಾ ಹಿಂದಿನ ಬಾರಿಯಂತಿಲ್ಲ. ಸಾಕಷ್ಟು ಭಿನ್ನವಾಗಿದೆ. ಪ್ರತಿಯೊಬ್ಬರೂ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ರೋಗ ನಿಯಂತ್ರಣದ ವಿಚಾರದಲ್ಲಿ ಹೇಳುತ್ತಿರುವ ಮಾತು ಬೇರೆ. ಇರುವ ವಾಸ್ತವ ಅಂಶವೇ ಬೇರೆಯಾಗಿದೆ. ಕಳೆದ ಎರಡು ದಿನದಲ್ಲಿ ನಾನು ನನ್ನ ಭಾವ ಹಾಗೂ ಅವರ ತಂದೆಯನ್ನು ಕಳೆದುಕೊಂಡಿದ್ದೇನೆ. ವಾಸ್ತವಾಂಶ ನನಗೆ ತಿಳಿದಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಈ ವಿಡಿಯೋವನ್ನು ಸಿದ್ದರಾಮಯ್ಯ ಶೇರ್ ಮಾಡಿಕೊಂಡು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.