ಬಿಜೆಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಟಗರು ಗುಟುರು
ಬೆಂಗಳೂರು : ರಾಜ್ಯ ವಿಧಾನಸಭೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ವಿಧಾನಮಂಡಲದ ಅಧಿವೇಶನವನ್ನೇ ನಿಯಮಾವಳಿಯಂತೆ ನಿಗದಿತ ದಿನಗಳ ಕಾಲ ನಡೆಸದೆ ಮೊಟಕು ಗೊಳಿಸುತ್ತಿರುವ ಬಿಜೆಪಿ ಸರ್ಕಾರ ಲೋಕಸಭಾಧ್ಯಕ್ಷರನ್ನು ಕರೆಸಿ ‘ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯಗಳು’ ಎಂಬ ವಿಷಯದ ಮೇಲೆ ಪಾಠ ಮಾಡಿಸುತ್ತಿರುವುದು ಪ್ರಹಸನದಂತೆ ಕಾಣಿಸುತ್ತಿದೆ.
ವಿಧಾನಸಭೆಯ ಕಾರ್ಯವಿಧಾನ/ನಡವಳಿಕೆಯ ನಿಯಮದಂತೆ ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕಾಗುತ್ತದೆ. ಇಲ್ಲಿಯ ವರೆಗೆ ಈ ವರ್ಷ ಅಧಿವೇಶನ ನಡೆದಿರುವುದು 30ದಿನ ಮಾತ್ರ. ಈ ವೈಫಲ್ಯ ಮುಚ್ಚಿಟ್ಟುಕೊಂಡು ಯಾವ ಮುಖ ಹೊತ್ತು ಲೋಕಸಭಾಧ್ಯಕ್ಷರಿಂದ ಪಾಠ ಕೇಳುತ್ತಿರಿ ಬಿಜೆಪಿ ಶಾಸಕರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಭಾಧ್ಯಕ್ಷರನ್ನು ಹೊರತುಪಡಿಸಿ ರಾಜ್ಯಕ್ಕೆ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಷ್ಟೇ ಕೂರಬಹುದಾದ ಆಸನದಲ್ಲಿ ಲೋಕಸಭಾಧ್ಯಕ್ಷರನ್ನು ಕೂರಿಸುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ವಿಧಾನಸಭೆಯ ಪಾವಿತ್ರ್ಯ ನಾಶ ಕೂಡಾ ಆಗಿದೆ.
ಈ ಪಾಪದ ಫಲವನ್ನು ಬಿಜೆಪಿ ಹೊರಬೇಕಾಗುತ್ತದೆ. ಆಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯನ್ನೇ ಬುಡಮೇಲು ಮಾಡಿರುವ ಬಿಜೆಪಿ ಸದಸ್ಯರಿಗೆ ‘ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯ’ಗಳ ಬಗ್ಗೆ ಚರ್ಚಿಸುವ ಯಾವ ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಜನಪ್ರತಿನಿಧಿಗಳ ಪಾಲಿನ ಪವಿತ್ರಕ್ಷೇತ್ರವಾದ ವಿಧಾನಸಭೆಯ ಸಭಾಂಗಣದೊಳಗೆ ಶಾಸಕರಲ್ಲದವರಿಗೂ ಮುಕ್ತ ಪ್ರವೇಶ ನೀಡಿ ಅದನ್ನು ಸಾರ್ವಜನಿಕ ವೇದಿಕೆ ಮಾಡಿದ ಅಪಕೀರ್ತಿಗೆ ಬಿಜೆಪಿ ಮತ್ತು ವಿಧಾನಸಭಾಧ್ಯಕ್ಷರು ಭಾಜನರಾಗಿದ್ದಾರೆ. ಇತಿಹಾಸ ಇದನ್ನು ಕ್ಷಮಿಸುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.