IND vs SA : ವೈಜಾಕ್ ನಲ್ಲಿ ಟೀಂ ಇಂಡಿಯಾಗೆ ಡು ಆರ್ ಡೈ ಮ್ಯಾಚ್..!!
ಮೊದಲೆರಡು ಟಿ 20 ಪಂದ್ಯದಲ್ಲಿ ಸೋತಿರುವ ಟೀಂ ಇಂಡಿಯಾ ಇದೀಗ ತೀವ್ರ ಒತ್ತಡಕ್ಕೆ ಸಿಲುಕಿದೆ.
ದೆಹಲಿ, ಕಟಕ್ ಪಂದ್ಯಗಳಲ್ಲಿನ ಸೋಲು ಟೀಂ ಇಂಡಿಯಾಗೆ ಮರ್ಮಾಘಾತ ನೀಡಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 211 ರನ್ ಗಳಿಸಿತ್ತು.
ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 19.1 ಓವರ್ ಗಳಲ್ಲಿ 212 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಇದಾದ ಬಳಿಕ ಕಟಕ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 148 ರನ್ ಗಳಿಸಿತ್ತು.
ಈ ಗುರಿಯನ್ನು ಆಫ್ರಿಕಾ ತಂಡ 18.1 ಓವರ್ ಗಳಲ್ಲಿ ಮುಟ್ಟಿತ್ತು.
ಈ ಎರಡೂ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಬೊಂಬಾಟ್ ಆಗಿದ್ದರೂ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಗಿತ್ತು.
ಹೀಗಾಗಿ ಇಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ 3ನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ಭಾರಿ ತಯಾರಿ ನಡೆಸಿದೆ.
ವಿಶಾಖಪಟ್ಟಣದ ವೈ ಎಸ್ ರಾಜಶೇಖರ್ ರಾವ್ ಕ್ರೀಡಾಂಗಣದಲ್ಲಿ ಮೂರನೇ ಟಿ 20 ಪಂದ್ಯ ನಡೆಯಲಿದೆ.
ಈ ಪಂದ್ಯ ಟೀಮ್ ಇಂಡಿಯಾದ ಪಾಲಿಗೆ ಒಂದು ರೀತಿಯಲ್ಲಿ ಮಾಡು ಇಲ್ಲವೆ ಮಡಿ ಇದ್ದ ಹಾಗೇ.

ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೇ ಸರಣಿ ದಕ್ಷಿಣ ಆಫ್ರಿಕಾ ತಂಡದ ಪಾಲಾಗಲಿದೆ.
ಹೀಗಾಗಿ ಯಂಗ್ ಇಂಡಿಯಾ ಕಂ ಬ್ಯಾಕ್ ಮಾಡಲೇ ಬೇಕಿದೆ.
ಅಂದಹಾಗೆ ದೆಹಲಿ – ಕಟಕ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಮಾಡಿದ ತಪ್ಪನ್ನು ಇಂದಿನ ಪಂದ್ಯದಲ್ಲಿ ಮರೆತು ಆಡಬೇಕಿದೆ.
ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿದೆ. ಹೀಗಾಗಿ ಆಫ್ರಿಕಾ ಬ್ಯಾಟರ್ ಗಳನ್ನು ಕಟ್ಟಿ ಹಾಕಲು ಟೀಂ ಇಂಡಿಯಾ ಹೊಸ ತಂತ್ರವನ್ನು ಕೂಡ ಹುಡುಕಬೇಕಾಗಿದೆ.
ಟಿ20 ಕ್ರಿಕೆಟ್ನಲ್ಲಿ ಕೇವಲ ಸ್ಪಿನ್ ಮೂಲಕ ಪಂದ್ಯ ಗೆಲ್ಲಬಹುದು ಅನ್ನುವ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ಮೊದಲು ಕೈ ಬಿಡಬೇಕಿದೆ.
ಪಿಚ್ ಸ್ಪಿನ್ ಫ್ರೆಂಡ್ಲಿ ಇದ್ದರೂ ಸ್ಪಿನ್ನರ್ಗಳು ಬೌಲಿಂಗ್ ಅರಂಭಿಸುವ ಮೊದಲೇ ದಕ್ಷಿಣ ಆಫ್ರಿಕಾ ಪಂದ್ಯವನ್ನು ದೂರ ತೆಗೆದುಕೊಂಡು ಹೋದರೆ ರಣತಂತ್ರ ಉಲ್ಟಾ ಆಗುತ್ತದೆ.
ಹೀಗಾಗಿ ಟೀಮ್ ಇಂಡಿಯಾ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ. ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಒಂದೆರಡು ಬದಲಾವಣೆಗಳಾಗುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಸಾಂಘೀಕವಾಗಿ ಆಟ ಆಡುವ ಜೊತೆಗೆ ಬದಲಾವಣೆಯನ್ನೂ ಮಾಡಿಕೊಳ್ಳಬೇಕಿದೆ.