ಬಿಎಸ್ ವೈ ಧೂಳಿಗೂ ಸಮನಿಲ್ಲದವರು ಈಗ ಟೀಕೆ ಮಾಡುತ್ತಿದ್ದಾರೆ: ಸೋಮಶೇಖರ್
ಮೈಸೂರು: ಯಡಿಯೂರಪ್ಪ ಅವರನ್ನು ದಿನ ಬೆಳಗಾದರೆ ಟೀಕಿಸುತ್ತಿದ್ದಾರೆ. ಅವರೆಲ್ಲಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಧೂಳಿಗೂ ಸಮನಾಗಿಲ್ಲದವರು.. ಅಂತವರು ಬಿಎಸ್ ವೈ ವಿರುದ್ಧ ಟೀಕಾಪ್ರಹಾರ ನಡೆಸುತ್ತಾ ಇದ್ದಾರೆ ಎಂದು ಸಚಿವ ಎಸ್ಟಿ ಸೋಮಶೇಖರ್ ಕಿಡಿಕಾರಿದ್ದಾರೆ.. ಮೈಸೂರಿನಲ್ಲಿ ಮಾತನಾಡಿರೋ ಅವರು ನಮ್ಮಿಂದ ಸರ್ಕಾರ ಬಂತು, ನಮ್ಮಿಂದ ಸರ್ಕಾರ ಬಂತು ಎಂದು ಪದೇ ಪದೇ ಕೆಲವರು ಹೇಳುತ್ತಿದ್ದಾರೆ ಎಂದು ಹೇಳಿದರು.
ಸ್ವಲ್ಪನಾದರೂ ಕಾಮನ್ ಸೆನ್ಸ್ ಇರಬೇಕು. ಇವರು ಯಾರನ್ನೂ ನಂಬಿಕೊಂಡು ನಾವು ಸರ್ಕಾರ ಮಾಡಿಲ್ಲ. ಇವರಿಗೆ ಯಡಿಯೂರಪ್ಪ ಬಗ್ಗೆ ಅಸಮಧಾನವಿದ್ದರೆ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ಅದನ್ನು ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಅಲ್ಲದೇ ಈ ಸರ್ಕಾರ ಯಾರಿದಂದಲೂ ಬಂದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ 104 ಶಾಸಕರು ಗೆದ್ದಿದ್ದರು. ಜೆಡಿಎಸ್ ಕಾಂಗ್ರೆಸ್ ನ ನಾವು 17 ಜನ ಅವರ ಜೊತೆ ಬಂದೆವು. ಈಗ ಸರ್ಕಾರವಾಗಿದೆ. ಯಡಿಯೂರಪ್ಪನ ನೇತೃತ್ವದಲ್ಲಿ 104 ಜನ ಗೆಲ್ಲದೆ ಇದ್ದಿದ್ದರೆ ಸರ್ಕಾರ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂ ಬಿಎಸ್ ವೈ ಜೊತೆ ಹೆಚ್ ಡಿಕೆ ಭೇಟಿ – ಕುತೂಹಲ ಕೆರಳಿಸಿದ ಉಭಯ ನಾಯಕರ ನಡೆ
ಇನ್ನೂ ಇಂದು ಯಡಿಯೂರಪ್ಪನ ಬಗ್ಗೆ ಮಾತನಾಡುವ ಇವರು ಯಾಕೆ ಚುನಾವಣೆಯಲ್ಲಿ ಸೋತರು. ಒಂದು ಬಾರಿ ಸರಿ, ಎರಡು ಬಾರಿ ಸರಿ. ಪ್ರತಿ ದಿನವೂ ಇವರದ್ದು ಯಡಿಯೂರಪ್ಪರನ್ನು ಟೀಕೆ ಮಾಡುವುದೇ ಆಗಿದೆ. ಯಡಿಯೂರಪ್ಪನವರ ಪರಿಶ್ರಮ, ನಾಯಕತ್ವ ಎಂತದ್ದು ಎನ್ನುವುದನ್ನು ಅರಿತುಕೊಂಡು ಮಾತನಾಡಲಿ. ಯಡಿಯೂರಪ್ಪನವರ ಸಮಕ್ಕೆ ಇರುವವರು ಮಾತನಾಡಿದರೆ ಅದಕ್ಕೊಂದು ಬೆಲೆ ಇರುತ್ತದೆ ಎಂದು ಪರೋಕ್ಷವಾಗಿ ಸಿ ಪಿ ಯೋಗೇಶ್ವರ್ ಸಿಎಂ ವಿರುದ್ಧ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.