ಬೆಂಗಳೂರಿನಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಅತೃಪ್ತರ ಸಭೆ ಅಲ್ಲ : ಎಸ್.ಟಿ ಸೋಮಶೇಖರ್
ಮೈಸೂರು : ಮೊನ್ನೆ ಬೆಂಗಳೂರಿನಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಅತೃಪ್ತರ ಸಭೆ ಅಲ್ಲ, ತಮ್ಮವರ ವಿಧಾನಪರಿಷತ್ ನೇಮಕ ಹಾಗೂ ರಾಜ್ಯಸಭೆ ಟಿಕೆಟ್ ಗಾಗಿ ಒತ್ತಡ ಹೇರಲು ನಡೆದಿರುವ ಸಭೆ ಇದು ಎಂದು ಸಚಿವ ಎಸ್.ಟಿ ಸೋಮಶೇಖರ್ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಬೆಂಗಳೂರಿನಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಅತೃಪ್ತರ ಸಭೆ ಅಲ್ಲ. ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರನಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಶಾಸಕರ ಒಟ್ಟಾಗಿ ಸೇರಿಸಿದ್ದಾರೆ ಅಷ್ಟೆ. ಈ ಸಭೆಯಲ್ಲಿ ಸಿಎಂ ವಿರುದ್ಧ ಯಾವುದೇ ಚರ್ಚೆ ನಡೆದಿಲ್ಲ. ತಮ್ಮವರ ವಿಧಾನಪರಿಷತ್ ನೇಮಕ ಹಾಗೂ ರಾಜ್ಯಸಭೆ ಟಿಕೆಟ್ ಗಾಗಿ ಒತ್ತಡ ಹೇರಲು ನಡೆದಿರುವ ಸಭೆ ಇದು. ಈ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಅಲ್ಲಿ ಚರ್ಚೆ ಆಗಿಲ್ಲ ಎಂದರು.
ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಅವರು, ಹೆಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಶಂಕರ್ ಮೂವರಿಗೂ ವಿಧಾನ ಪರಿಷತ್ ನೇಮಕ ಮಾಡಬೇಕು. ಈ ಬಗ್ಗೆ ಸಿಎಂಗೆ ಹೇಳಿದ್ದೇವೆ. ನಾವೆಲ್ಲ ಶಾಸಕರು ಈ ಮೂವರ ಪರ ಇದ್ದೇವೆ ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.
ಇನ್ನು ಆಪರೇಷನ್ ಕಾಂಗ್ರೆಸ್ ವಿಚಾರದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವೇ ಸ್ವೀಕರಿಸಿಲ್ಲ. ಮೊದಲು ಅವರ ಪಕ್ಷದ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಲಿ. ಆ ಮೇಲೆ ಉಳಿದದ್ದು ನೋಡಲಿ ಎಂದು ಟಾಂಗ್ ನೀಡಿದರು.