#ಸುಳ್ಳುರಾಮಯ್ಯ ಅವರೇ, ಜನರು ನಿಮ್ಮಂತ ಸುಳ್ಳುಗಾರರನ್ನು ಇದುವರೆಗೆ ಕಂಡಿಲ್ಲ : ಬಿಜೆಪಿ BJP saaksha tv
ಬೆಂಗಳೂರು : ಮಾನ್ಯ #ಸುಳ್ಳುರಾಮಯ್ಯ ಅವರೇ, ರಾಜ್ಯದ ಜನರು ನಿಮ್ಮಂತ ಸುಳ್ಳುಗಾರರನ್ನು ಇದುವರೆಗೆ ಕಂಡಿಲ್ಲ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯನವರೇ, ಪ್ರಧಾನಿಯ ಸೈದ್ಧಾಂತಿಕ ಹಿನ್ನೆಲೆಯನ್ನು ನೀವು ಪ್ರಶ್ನೆ ಮಾಡಿದ್ದೀರಿ. ಹಾಗಾದರೆ ನಿಮ್ಮ ಸಿದ್ಧಾಂತ ಯಾವುದು? ಜೆಡಿಎಸ್ ಪಕ್ಷದಲ್ಲಿದ್ದಾಗ ದೇವೇಗೌಡರು, ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸೋನಿಯಾ ಗಾಂಧಿ, ಮತರಾಜಕಾರಣಕ್ಕೆ ಟಿಪ್ಪು ಎನ್ನುವುದೇ ನಿಮ್ಮ ಸಿದ್ಧಾಂತವಲ್ಲವೇ ಎಂದು ಪ್ರಶ್ನಿಸಿದೆ.
ಪಕ್ಷಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಸಿದ್ದರಾಮಯ್ಯ ಕರೆಕೊಟ್ಟಿದ್ದಾರೆ. ಪಕ್ಷಕ್ಕೆ ಬರುವ ಯುವಕರಿಗೆ ಸ್ಥಾಪಿತ ಹಿತಾಸಕ್ತಿಗಳ ಕೂಟದಲ್ಲಿ ಯಾವ ಸ್ಥಾನ ನೀಡುತ್ತೀರಿ? ಇದೇ ನಮ್ಮ ಕೊನೆಯ ಚುನಾವಣೆ ಎನ್ನುತ್ತಲೇ ನೀವು ಮೂರು ಬಾರಿ ಚುನಾವಣೆಗೆ ನಿಂತಿರಿ. ಕಾಂಗ್ರೆಸ್ ನಲ್ಲಿ ಹೊಸಬರಿಗೆ ಅವಕಾಶ ಸಾಧ್ಯವೇ ಎಂದು ವ್ಯಂಗ್ಯವಾಡಿದೆ.
ಮಾನ್ಯ #ಸುಳ್ಳುರಾಮಯ್ಯ ಅವರೇ, ರಾಜ್ಯದ ಜನರು ನಿಮ್ಮಂತ ಸುಳ್ಳುಗಾರರನ್ನು ಇದುವರೆಗೆ ಕಂಡಿಲ್ಲ. 2013 ರಿಂದಲೂ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಲೇ ಬಂದಿದ್ದೀರಿ. ನುಡಿದಂತೆ ನಡೆಯಿರಿ ಎಂದರೆ ಇನ್ನೊಂದು ಚುನಾವಣೆಯವರೆಗೆ ತಡೆಯಿರಿ ಎನ್ನುತ್ತೀರಿ. ಇದಕ್ಕಾಗಿಯೇ #ಬುರುಡೆರಾಮಯ್ಯ ಎನ್ನುವುದು ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕುಟುಕಿದೆ.