ಸೈಯ್ಯದ್ ಮುಷ್ತಾಕ್ ಅಲಿ: ಸೆಮಿಫೈನಲ್ಸ್ ನಲ್ಲಿ ಕರ್ನಾಟಕ-ವಿದರ್ಭ ಕಾದಾಟ Karnataka-Vidarbha saaksha tv
ಕ್ವಾರ್ಟರ್ ಫೈನಲ್ಸ್ ನಲ್ಲಿ ಸೂಪರ್ ಓವರ್ ನಲ್ಲಿ ಗೆಲುವು ದಾಖಲಿಸಿ ಸೆಮಿಫೈನಲ್ಸ್ ಹಂತ ಪ್ರವೇಶಿಸಿರುವ ಕರ್ನಾಟಕ ತಂಡ, ಶನಿವಾರ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ, ವಿದರ್ಭ ವಿರುದ್ಧ ಕಾದಾಟ ನಡೆಸಲಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿದ್ದು, ಫೈನಲ್ ಗೆ ಅರ್ಹತೆ ಪಡೆಯಲು ರಣ ತಂತ್ರವನ್ನು ರೂಪಿಸಿಕೊಂಡಿವೆ. ಮಹತ್ವದ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕರುಣ್ ನಯರ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಕರ್ನಾಟಕ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಆಟಗಾರರು ಇದ್ದಾರೆ. ಮನೀಷ್ ಪಾಂಡೆ (205), ಕರುಣ್ ನಾಯರ್ (218) ರನ್ ಗಳನ್ನು ಕಲೆ ಹಾಕಿ ಗಮನ ಸೆಳೆದಿದ್ದಾರೆ. ಈ ಆಟಗಾರರನ್ನು ಕಟ್ಟಿ ಹಾಕಲು ಎದುರಾಳಿ ಬೌಲರ್ ಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಕರುಣ್ ಹಾಗೂ ಮನೀಷ್ ಪಾಂಡೆ ಆಡಿರುವ 7 ಪಂದ್ಯಗಳಲ್ಲಿ 2 ಅರ್ಧಶತಕ ಬಾರಿಸಿದ್ದಾರೆ. ಉಳಿದಂತೆ ರೋಹನ್ ಕದಂ, ಅಭಿನವ್ ಮನೋಹರ್, ದೇವದತ್ ಪಡೀಕ್ಕಲ್, ಬಿ.ಆರ್.ಶರತ್, ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ಮಿಂಚು ಹರಿಸುತ್ತಿರುವ ಸ್ಪಿನ್ ಬೌಲರ್ ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕೆ.ಗೌತಮ್, ಕೆ.ಸಿ ಕರಿಯಪ್ಪ ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಯನ್ನು ಕಾಡಬೇಕಿದೆ. ಇನ್ನು ವೇಗಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡಬೇಕಿದೆ.
ವಿದರ್ಭ ತಂಡದಲ್ಲಿ ಕರ್ನಾಟಕದ ಮಾಜಿ ಆಟಗಾರ ಗಣೇಶ್ ಸತೀಶ್ ಇದ್ದು, ಇವರ ಆತಿಥೇಯ ತಂಡದ ಪರ ಅಬ್ಬರಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಅಥರ್ವ್ ತೇಡೆ, ಅಕ್ಷಯ್ ವಾಡ್ಕರ್, ಶುಭಮ್ ದುಬೆ, ಜಿತೇಶ್ ಶರ್ಮಾ, ಅಕ್ಷಯ್ ವಖಾರೆ ರನ್ ವೇಗಕ್ಕೆ ಚುರುಕು ಮುಟ್ಟಿಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಬೌಲರ್ ಗಳು ಬಿಗುವಿನ ದಾಳಿ ನಡೆಸಿ ಆರ್ಭಟಿಸಬೇಕಿದೆ