ಜನರ ಮೇಲೆ ಕೇಂದ್ರದಿಂದ ತೆರಿಗೆ ಭಯೋತ್ಪಾದನೆ : ಯು.ಟಿ.ಖಾದರ್
ಬೀದರ್ : ಕೇಂದ್ರದ ಬಿಜೆಪಿ ಸರ್ಕಾರ ಜನರ ಮೇಲೆ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ ಎಂದು ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ನೆರೆಯ ದೇಶಗಳಿಗೆ ಭಾರತದ ಮೂಲಕ ಪೆಟ್ರೋಲ್, ಡಿಸೇಲ್ ಪೂರೈಕೆ ಮಾಡುತ್ತಿದ್ದರೂ ಅಲ್ಲಿ ಅವುಗಳ ಬೆಲೆ ಹೆಚ್ಚಿಲ್ಲ.
ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಬೆಲೆ ಹೆಚ್ಚಿಸುವ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರುವಂತೆ ಮಾಡಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ.
ಬೆಲೆ ಹೆಚ್ಚಳದ ವಿಷಯವನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದೇ ಕಾರಣಕ್ಕಾಗಿ ಅಧಿಕಾರವನ್ನೂ ಕಳೆದುಕೊಳ್ಳಲಿದೆ ಎಂದು ಖಾದರ್ ಭವಿಷ್ಯ ನೀಡಿದರು.
ಇನ್ನು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳಯಿಂದಾಗಿ ಬಸ್ ಮಾಲೀಕರು, ಸರಕು ಸಾಗಣೆ ಉದ್ಯಮದಲ್ಲಿರುವ ದೊಡ್ಡವರಿಗೆ ಯಾವುದೇ ಪರಿಣಾಮ ಆಗುವುದಿಲ್ಲ.
ತೆರಿಗೆ ಹೊರೆ ಜನ ಸಾಮಾನ್ಯರ ಮೇಲೆ ಬೀಳುತ್ತಿದೆ. ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಅನುದಾನ ಒದಗಿಸಿ ಮಾರುಕಟ್ಟೆ ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು.