ಬೆಂಗಳೂರು: ಮಲೆ ಮಹದೇಶ್ವರ ಎಂದರೆ ಕರುನಾಡಿನ ಭಕ್ತರಿಗೆ ಎಲ್ಲಿಲ್ಲದ ಭಕ್ತಿ. ಅದರಲ್ಲೂ ಮಾದೇಶ್ವರ ದಯಬಾರದೆ.. ಎನ್ನುವ ಜಾನಪದ ಶೈಲಿಯ ಭಕ್ತಿಗೀತೆ ಕೇಳಿದರೆ ಮೈಮನ ರೋಮಾಂಚನಗೊಳ್ಳುತ್ತದೆ. ಜಾನಪದ ಗಾಯಕ ಮಳವಳ್ಳಿ ಎಂ ಮಹದೇವಸ್ವಾಮಿ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡು ಇಂದಿಗೂ ಕೋಟ್ಯಂತರ ಕನ್ನಡಿಗರ ಫೇವರಿಟ್. ಇದೀಗ ಇದೇ ಗೀತೆಯನ್ನು ಸಂಸದ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಹಾಡುವ ಮೂಲಕ ಕನ್ನಡಿಗರ ಹುಬ್ಬೇರಿಸಿದ್ದಾರೆ. ಅಚ್ಚಕನ್ನಡದ ಈ ಜಾನಪದ ಸೊಗಡಿನ ಹಾಡಿಗೆ ಶಿವಶ್ರೀ ಅವರ ಧ್ವನಿ ಕೇಳಿ ನೆಟ್ಟಿಗರು ಫಿದಾ ಆಗಿದ್ದಾರೆ.
ಮೂಲತಃ ಕನ್ನಡದವರಲ್ಲದಿದ್ದರೂ, ಮದುವೆಯ ನಂತರ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಪ್ಪಿಕೊಂಡಿರುವ ಶಿವಶ್ರೀ, ಅಷ್ಟೇ ಸ್ಪಷ್ಟವಾಗಿ ಕನ್ನಡದ ಕಠಿಣ ಜಾನಪದ ಹಾಡನ್ನು ಹಾಡಿರುವುದು ವಿಶೇಷ. ಈ ವಿಡಿಯೋ ಈಗ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ಗಂಡನ ಇಷ್ಟದ ಹಾಡಿಗೆ ದನಿಯಾದ ಶಿವಶ್ರೀ
ಸಾಮಾನ್ಯವಾಗಿ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶಿವಶ್ರೀ ಸ್ಕಂದಪ್ರಸಾದ್, ತಮಿಳು ಮೂಲದವರು. ಆದರೆ ಕನ್ನಡದ ಈ ಅಪ್ಪಟ ಮಣ್ಣಿನ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಪ್ರಮುಖ ಕಾರಣ ಅವರ ಪತಿ ತೇಜಸ್ವಿ ಸೂರ್ಯ. ಈ ಕುರಿತು ಸ್ವತಃ ಶಿವಶ್ರೀ ಅವರೇ ವಿವರಣೆ ನೀಡಿದ್ದಾರೆ. ತೇಜಸ್ವಿ ಸೂರ್ಯ ಅವರಿಗೆ ಈ ಹಾಡೆಂದರೆ ಪಂಚಪ್ರಾಣವಂತೆ. ಅವರು ಆಗಾಗ ಮನೆಯಲ್ಲಿ ಈ ಹಾಡನ್ನು ಗುನುಗುತ್ತಿರುತ್ತಾರೆ. ಪತಿ ಅತ್ಯಂತ ಮುಗ್ಧವಾಗಿ ಮತ್ತು ಭಕ್ತಿಯಿಂದ ಈ ಹಾಡನ್ನು ಹಾಡುವುದನ್ನು ಕೇಳಿಯೇ ತಮಗೂ ಈ ಹಾಡಿನ ಮೇಲೆ ಪ್ರೀತಿ ಹುಟ್ಟಿತು ಎಂದು ಶಿವಶ್ರೀ ಹೇಳಿಕೊಂಡಿದ್ದಾರೆ.
ಕಳೆದ ಕಾರ್ತಿಕ ಮಾಸದಲ್ಲಿ ತೇಜಸ್ವಿ ಸೂರ್ಯ ಅವರು ಈ ಹಾಡನ್ನು ಪದೇ ಪದೇ ಕೇಳುವಂತೆ ಮಾಡಿದರು. ಪ್ರತಿ ಬಾರಿಯೂ ಅವರ ಭಕ್ತಿ ಮತ್ತು ಧ್ವನಿ ಈ ಹಾಡನ್ನು ಜೀವಂತವಾಗಿಸುತ್ತಿತ್ತು. ಕೆಲವು ಹಾಡುಗಳು ಕೇವಲ ಸಂಗೀತದಿಂದ ಮಾತ್ರವಲ್ಲ, ಅದನ್ನು ನಮ್ಮ ಜೀವನಕ್ಕೆ ಪರಿಚಯಿಸುವ ವ್ಯಕ್ತಿಗಳಿಂದಲೂ ವಿಶೇಷವಾಗುತ್ತವೆ. ನನ್ನ ಪಾಲಿಗೆ ಈ ಹಾಡು ತೇಜಸ್ವಿ ಅವರ ಭಕ್ತಿಯೊಂದಿಗೆ ಬೆರೆತುಹೋಗಿದೆ ಎಂದು ಶಿವಶ್ರೀ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಸ್ಪಷ್ಟ ಕನ್ನಡ ಉಚ್ಚಾರಣೆಗೆ ಕನ್ನಡಿಗರ ಮೆಚ್ಚುಗೆ
ಜಾನಪದ ಹಾಡುಗಳನ್ನು ಹಾಡುವುದು ಸುಲಭವಲ್ಲ. ಅದಕ್ಕೆ ತಕ್ಕನಾದ ದನಿ ಮತ್ತು ಭಾವ ಬೇಕು. ಆದರೆ ಶಿವಶ್ರೀ ಅವರು ಕರೋಕೆ ಟ್ರ್ಯಾಕ್ ಬಳಸಿ ಹಾಡಿರುವ ಈ ಹಾಡಿನಲ್ಲಿ ಪದಗಳ ಉಚ್ಚಾರಣೆ ಅತ್ಯಂತ ಸ್ಪಷ್ಟವಾಗಿದೆ. ಕನ್ನಡ ಬಾರದಿದ್ದರೂ ಇಷ್ಟು ಶ್ರದ್ಧೆಯಿಂದ ಕಲಿತು ಹಾಡಿರುವುದನ್ನು ಕಂಡ ಕನ್ನಡಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿರುವ ಅಭಿಮಾನಿಯೊಬ್ಬರು, ನೀವು ಎಲ್ಲೇ ವಾಸಿಸುತ್ತಿದ್ದರೂ ಅಲ್ಲಿನ ಭಾಷೆಯನ್ನು ಕಲಿಯಲು ಇವರೇ ಮಾದರಿ. ಇದು ನಾಡು ನುಡಿಯ ಮೇಲಿನ ಗೌರವವನ್ನು ತೋರಿಸುತ್ತದೆ ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬರು, ನಿಮ್ಮ ಕಂಠಸಿರಿಗೆ ನಾವು ಮನಸೋತಿದ್ದೇವೆ, ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡಿ, ಕನ್ನಡಿಗರು ನಿಮ್ಮನ್ನು ಸದಾ ಪ್ರೋತ್ಸಾಹಿಸುತ್ತಾರೆ ಎಂದು ಹಾರೈಸಿದ್ದಾರೆ.
ಒಟ್ಟಾರೆಯಾಗಿ, ಮಹದೇಶ್ವರನ ಸನ್ನಿಧಿಯಲ್ಲಿ ದೀನನಾಗಿ ಬೇಡುವ ಈ ಹಾಡು ಈಗ ತೇಜಸ್ವಿ ಸೂರ್ಯ ಅವರ ಮನೆಯಂಗಳದಲ್ಲಿ ಹೊಸ ರೂಪ ಪಡೆದುಕೊಂಡಿದ್ದು, ಶಿವಶ್ರೀ ಅವರ ಕಂಠದ ಮೂಲಕ ಮತ್ತೆ ಕನ್ನಡಿಗರ ಮನೆಮನ ತಲುಪಿದೆ.








