ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿದ ಸೂರ್ಯನ ರೌದ್ರನರ್ತನ
ಕಲಬುರಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸೂರ್ಯನ ರುದ್ರ ನರ್ತನ ಪ್ರಾರಂಭವಾಗಿದ್ದು, ತೊಗರಿ ನಾಡು ಕಲಬುರಗಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ತಾಪಮಾನ 42 ಡಿಗ್ರಿ ದಾಖಲಾಗಿದೆ.
ಈ ತಿಂಗಳ ಅಂತ್ಯದವರೆಗೂ ಹಾಗೂ ಮುಂದಿನ ಮೇ ತಿಂಗಳಲ್ಲಿ ಮತ್ತಷ್ಟು ತಾಪ ಏರಿಕೆಯಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾಗುವ ಬಿಸಿಲು ಸಂಜೆ 6 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ಮಧ್ಯಾಹ್ನದ ಹೊತ್ತು ಭೂಮಿ ಅಕ್ಷರಶಃ ಕಾದ ಹಂಚಿನಂತಾಗುತ್ತಿದೆ. ಡಾಂಬರ್ ರಸ್ತೆಗಳು ಬಿಸಿಲಿನ ತೇವದಿಂದ ಜೀನಗುಡುತ್ತಿವೆ.
ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಪ್ರತಿ ವರ್ಷ ಗರಿಷ್ಠ ಮಟ್ಟದಲ್ಲಿ ದಾಖಲಾಗುತ್ತದೆ. ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಅತಿ ಹೆಚ್ಚು ಬಿಸಿಲು ದಾಖಲಾಗುತ್ತಿದೆ.ಅದೇ ರೀತಿ ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಬಿಸಿಲು ದಾಖಲಾಗುತ್ತಿದೆ.
ಅಲ್ಲದೇ ಬಿಸಿಯಾದ ಒಣಹವೆಯಿಂದ ಬೆವತು ಹೋಗಿದ್ದಾರೆ. ಹೀಗಾಗಿ ಜನರು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ.