ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Case) ಹಗರಣದ ತನಿಖೆಯನ್ನು ಎಸ್ ಐಟಿ ನಡೆಸುತ್ತಿದ್ದು, ಇಲ್ಲಿಯವರೆಗೆ ಎಷ್ಟು ಹಣ ಮುಟ್ಟುಗೋಲು ಹಾಕಿಕೊಂಡಿದೆ ಎಂಬುವುದರ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಇಲ್ಲಿಯವರೆಗೆ ಚಿನ್ನಾಭರಣ ಸೇರಿದಂತೆ ಎಸ್ ಐಟಿ ಒಟ್ಟು 85,25,07,698 ರೂ. ಹಣ ಜಪ್ತಿ ಮಾಡಿದೆ ಎಂದು ಹೇಳಿದ್ದಾರೆ. ಆರೋಪಿಗಳಾದ ಸತ್ಯನಾರಾಯಣ ವರ್ಮಾ, ಜೆ.ಜಿ.ಪದ್ಮನಾಭ, ನಾಗೇಶ್ವರ ರಾವ್, ಚಂದ್ರಮೋಹನ್, ಜಿ.ಕೆ.ಜಗದೀಶ್ ಅವರಿಂದ ಒಟ್ಟು 14,33,35,000 ರೂ. ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಚಂದ್ರಮೋಹನ್ ಮತ್ತು ಜಿ.ಕೆ.ಜಗದೀಶ್ ರಿಂದ ಕ್ರಮವಾಗಿ 207 ಮತ್ತು 47.6 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.
217 ಬ್ಯಾಂಕ್ ಅಕೌಂಟ್ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ. ಮೊತ್ತವನ್ನು ಫ್ರೀಜ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ಮರಳಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಸತ್ಯನಾರಾಯಣ ವರ್ಮಾ, ಲ್ಯಾಂಬೋರ್ಗಿನಿ ಉರುಸ್ ಎಂಬ ಕಾರನ್ನು ಬಿಗ್ಬಾಯ್ಸ್ ಟಾಯ್ಸ್ ಕಂಪನಿ ಮೂಲಕ ಖರೀದಿ ಮಾಡಿದ್ದ. ಕಾರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಕಾರಿನ ಕಂಪನಿಯು ಕಾರನ್ನು ವಶಕ್ಕೆ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ.
ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಎಸ್.ಟಿ ನಿಗಮದ ಖಾತೆಗೆ 5 ಕೋಟಿ ರೂ. ಮರಳಿಸಿದೆ ಎಂದು ಹೇಳಿದ್ದಾರೆ.








